ರಾಷ್ಟ್ರಪತಿ ಚುನಾವಣೆ: ನಾರಾಯಣನ್ ಸೇರಿ 64 ಮಂದಿ ಕಣದಲ್ಲಿ
ನವದೆಹಲಿ, ಜೂನ್ 23 (ಪಿಟಿಐ)– ರಾಷ್ಟ್ರಪತಿ ಹುದ್ದೆಗಾಗಿ ಜುಲೈ 14 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯ ಇಂದು ಮುಕ್ತಾಯಗೊಂಡಿತು. ಉಪರಾಷ್ಟ್ರಪತಿ ಕೆ.ಆರ್. ನಾರಾಯಣನ್ ಮತ್ತು ಮಾಜಿ ಮುಖ್ಯ ಚುನಾವಣಾಧಿಕಾರಿ ಟಿ.ಎನ್. ಶೇಷನ್ ಅವರುಗಳ ನಾಮಪತ್ರಗಳು ಸೇರಿದಂತೆ ಒಟ್ಟು 64 ನಾಮಪತ್ರಗಳು ಸ್ವೀಕೃತಗೊಂಡಿವೆ.
ಉಪರಾಷ್ಟ್ರಪತಿ ನಾರಾಯಣನ್ ಅವರನ್ನು ಬೆಂಬಲಿಸಿ ಸಂಯುಕ್ತರಂಗ, ಕಾಂಗ್ರೆಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ನಾಮಪತ್ರಗಳನ್ನು ಸಲ್ಲಿಸಿವೆ.
ಅಲ್ಲದೆ ಬಿಎಸ್ಪಿ, ಹಹಿಯಾಣ ವಿಕಾಸ ಪಾರ್ಟಿ ಹಾಗೂ ಅಕಾಲಿದಳ ಶಿರೋಮಣಿ ಪಕ್ಷಗಳು ಸಹ ನಾರಾಯಣನ್ ಅವರನ್ನು ಬೆಂಬಲಿಸಿವೆ. ಶೇಷನ್ ಅವರಿಗೆ ಕೇವಲ ಶಿವಸೇನೆ ಹಾಗೂ ಇತರ ಪಕ್ಷೇತರರ ಬೆಂಬಲವಿದೆ. ಚುನಾವಣೆಯಲ್ಲಿ ಲೋಕಸಭೆಯ 533 ಸದಸ್ಯರು, 233 ರಾಜ್ಯಸಭಾ ಸದಸ್ಯರು, 4,077 ಶಾಸಕರು ಮತ ಚಲಾಯಿಸಿದ್ದಾರೆ.
ಲಾಲೂ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
ಪಟ್ನಾ, ಜೂನ್ 23– ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ಇತರ 55 ಜನರ ವಿರುದ್ಧ ಸಿಬಿಐ ಇಂದು ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತು.
ಕೇಂದ್ರದ ಮಾಜಿ ಸಚಿವ ಚಂದ್ರಪ್ರಸಾದ್ ವರ್ಮಾ, ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಜಗನ್ನಾಥ ಮಿಶ್ರಾ, ಲಾಲೂ ಪ್ರಸಾದ್ ಯಾದವ್ ಅವರ ಸಂಪುಟದ ಸಹೋದ್ಯೋಗಿಗಳಾದ ಭೋಲಾರಾಂ ತೂಫಾನಿ ಮತ್ತು ವಿದ್ಯಾ ಸಾಗರ್ ನಿಷಾದ್ ಹಾಗೂ 5 ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.