ADVERTISEMENT

25 ವರ್ಷಗಳ ಹಿಂದೆ: ಶನಿವಾರ 17.5.1997

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:45 IST
Last Updated 16 ಮೇ 2022, 19:45 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಮಹಿಳಾ ಮೀಸಲು ಮಸೂದೆಗೆ ತೀವ್ರ ಪ್ರತಿಭಟನೆ

ನವದೆಹಲಿ, ಮೇ 16– ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲು ಅವಕಾಶ ಕಲ್ಪಿಸುವ ಸಂವಿಧಾನದ 81ನೇ ತಿದ್ದುಪಡಿ ಮಸೂದೆಯನ್ನು ಆಳುವ ಪಕ್ಷ ಸೇರಿದಂತೆ ಇತರ ಎಲ್ಲ ಪಕ್ಷಗಳ ತೀವ್ರ ವಿರೋಧ ನಡುವೆ ಇಂದು ರಾತ್ರಿ 7.30ಕ್ಕೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡುವ ಮುನ್ನ ಲೋಕಸಭೆಯಲ್ಲಿ ಚರ್ಚೆಗೆ ಇಡಲಾಯಿತು.

ಇದಕ್ಕೆ ಮೊದಲು ಸಂವಿಧಾನ ತಿದ್ದು ಪಡಿಯು ಈ ಮಸೂದೆಯನ್ನು ಪರಿಶೀಲನೆಗೆ ಎತ್ತಿಕೊಳ್ಳುವ ಬಗೆಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲು ಪ್ರಧಾನಿ ಇಂದ್ರಕುಮಾರ್ ಗುಜ್ರಾಲ್ ಅವರಿಗೆ ಆಳುವ ಪಕ್ಷಗಳ ಹಿಂದುಳಿದ ವರ್ಗ ಮತ್ತು ಮುಸ್ಲಿಂ ಸದಸ್ಯರು ಅವಕಾಶ ನೀಡದೇ ಹೋದ ಅಪರೂಪದ ಘಟನೆ ನಡೆಯಿತು.

ADVERTISEMENT

ರಥಯಾತ್ರೆ– ರಾಜ್ಯಸಭೆಯಲ್ಲಿ ಭಾರಿ ಕೋಲಾಹಲ

ನವದೆಹಲಿ, ಮೇ 16 (ಯುಎನ್ಐ)– ಬಿಜೆಪಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರು ಈ ತಿಂಗಳ 18ರಂದು ಆರಂಭಿಸಲು ಉದ್ದೇಶಿಸಿರುವ ‘ಸ್ವರ್ಣ ಜಯಂತಿ ರಥಯಾತ್ರೆ’ ವಿಷಯ ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ನಾಯಕ ಮಹಮ್ಮದ್ ಆಜಂ ಖಾನ್ ಅವರು, ‘ಈ ರಥಯಾತ್ರೆಯಿಂದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚುವ ಸಾಧ್ಯತೆಯಿದೆ. ಜೊತೆಗೆ ಇದರಿಂದ ದೇಶದ ಕೋಮು ಸಾಮರಸ್ಯಕ್ಕೆ ತೀವ್ರ ಧಕ್ಕೆಯಾಗಲಿದೆ. ರಥಯಾತ್ರೆ ನಡೆದದ್ದೇ ಆದಲ್ಲಿ 1992ರ ಡಿಸೆಂಬರ್ ಆರರ ಘಟನೆ ಮರುಕಳಿಸಲಿದೆ’ ಎಂದು ಭೀತಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.