ಕೃಷಿ ಸಂಪತ್ತು ತೆರಿಗೆಯಲ್ಲಿವಿನಾಯಿತಿ: ಪಂಪ್ಸೆಟ್ ಮೇಲಿನ ಅಬ್ಕಾರಿ ಸುಂಕ ರದ್ದು
ನವದೆಹಲಿ, ಏ. 29– ತಮ್ಮ ಬಜೆಟ್ ಸಲಹೆಗಳ ಬಗ್ಗೆ ಕಾಂಗ್ರೆಸ್ ಪಕ್ಷದೊಳಗಡೆಯಲ್ಲಿ ಹಾಗೂ ಹೊರಗಡೆ ಟೀಕಿಸಿದವರಿಗೆ ಮಣಿದ ಕೇಂದ್ರ ಹಣಕಾಸು ಮಂತ್ರಿ ಹಾಗೂ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಕೃಷಿಕರಿಗೆ ಅನೇಕ ರಿಯಾಯಿತಿಗಳನ್ನು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು. ಒಟ್ಟು 5.09 ಕೋಟಿ ರೂಪಾಯಿಗಳಷ್ಟು ರಿಯಾಯಿತಿಗಳನ್ನು ನೀಡಲಾಗಿದೆ.
ರಾಜ್ಯದಲ್ಲಿ ‘ದೇವದಾಸಿ’ ಪದ್ಧತಿ: ಲೋಕಸಭೆಯಲ್ಲಿ ಪ್ರತಿಭಟನೆ
ನವದೆಹಲಿ, ಏ. 29– ಮೈಸೂರು ರಾಜ್ಯದಲ್ಲಿ ದೇವದಾಸಿ ಪದ್ಧತಿಯು ವೇಶ್ಯಾ ವೃತ್ತಿಯ ರೂಪದಲ್ಲಿ ಇನ್ನೂ ಮುಂದುವರೆಯುತ್ತಿದೆ ಎಂದು ಇಂದು ಲೋಕಸಭೆಯಲ್ಲಿ ಸದಸ್ಯರೊಬ್ಬರು ಹೇಳಿದಾಗ ರಾಜ್ಯದ ಸದಸ್ಯರು ಕೋಪೋದ್ರಿಕ್ತರಾದರು.
ಮೈಸೂರು ರಾಜ್ಯದಲ್ಲಿ ದೇವದಾಸಿ ಪದ್ಧತಿಯು ಇನ್ನೂ ಅಸ್ತಿತ್ವದಲ್ಲಿದೆಯೆಂಬುದು ಸರ್ಕಾರಕ್ಕೆ ಗೊತ್ತಿದೆಯೆ ಎಂದು ಸಮಾಜ ಕಲ್ಯಾಣ ಸಚಿವರನ್ನು ಶ್ರೀ ರಘುವೀರ್ ಸಿಂಗ್ ಶಾಸ್ತ್ರಿ ಅವರು ಕೇಳಿದಾಗ ಶ್ರೀ ಕೆ. ಲಕ್ಕಪ್ಪ ಮತ್ತು ಶ್ರೀ ಜೆ. ಇಮಾಂ ಅವರು ತೀವ್ರವಾಗಿ ಪ್ರತಿಭಟಿಸಿದರು.
ಅಪಮಾನಕಾರಿ: ಇಂತಹ ಮಾತು ಮೈಸೂರಿಗೆ ಅಪಮಾನಕಾರಿ ಎಂದು ನುಡಿದ ಶ್ರೀ ಇಮಾಂ ಅವರು, ನೀತಿ ನಡತೆಗಳ ವಿಷಯದಲ್ಲಿ ಇತರ ರಾಜ್ಯಗಳಿಗಿಂತ ಮೈಸೂರು ಉನ್ನತ ಸ್ಥಾನದಲ್ಲಿದೆ ಎಂದು ವಾದಿಸಿದರು.
ಇದು ‘ಕೀಳು ಪಂಗಡ’ವೊಂದರ ಮೇಲೆ ‘ಲೋಪ’ ಹೊರಿಸಲು ಉನ್ನತ ಸ್ತರದ ಸಮಾಜ ಕೈಗೊಂಡಿರುವ ಪ್ರಯತ್ನ ಎಂದು ಕೂಗಿದರು ಶ್ರೀ ಲಕ್ಕಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.