ಭದ್ರಾವತಿ ಉಕ್ಕು ಕಾರ್ಖಾನೆಯಲ್ಲಿ ಅವ್ಯವಸ್ಥೆ, ಅದಕ್ಷತೆಯಿಂದ ದುಃಸ್ಥಿತಿ
ಬೆಂಗಳೂರು, ಡಿ. 12– ಕೆಲವು ವರ್ಷಗಳಿಂದ ವದಂತಿ ರೂಪದಲ್ಲಿ ಹರಡಿ ಈಚಿನ ತಿಂಗಳುಗಳಲ್ಲಿ ವಿಧಾನ ಮಂಡಲದಲ್ಲಿ ಎದ್ದು, ಪತ್ರಿಕೆಗಳಲ್ಲಿ ಬಂದು, ಜನರಲ್ಲಿ ಅಪಾರ ಕುತೂಹಲ ಹುಟ್ಟಿಸಿದ ಭದ್ರಾವತಿಯ ಉಕ್ಕು ಕಾರ್ಖಾನೆಯ ದುಃಸ್ಥಿತಿಗೆ ಅಲ್ಲಿ ಕಂಡುಬಂದಿರುವ ಅವ್ಯವಸ್ಥೆ, ಅದಕ್ಷ ನಿರ್ವಹಣೆ ಕಾರಣವೆಂದು ವಿಧಾನಸಭೆಯ ಅಂದಾಜು ಪರಿಶೀಲಕ ಸಮಿತಿ ಅಭಿಪ್ರಾಯಪಟ್ಟಿದೆ.
ಉಕ್ಕಿನ ಉದ್ಯಮದ ಆಳ, ಅಗಲವನ್ನು ಬಲ್ಲ ಸಮರ್ಥ ವ್ಯಕ್ತಿಯೊಬ್ಬರನ್ನು ತಂದು, ನಿರ್ವಹಣಾಧಿಕಾರಿಯಾಗಿ ನೇಮಿಸಿ, ಕಳೆದ ಆರು ವರ್ಷಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸದೇ ಹೋದರೆ, ಕಾರ್ಖಾನೆ ಇನ್ನಷ್ಟು ದುಃಸ್ಥಿತಿಗೆ ಇಳಿದೀತು ಎಂದು ಅದು ಎಚ್ಚರಿಕೆ ನೀಡಿದೆ.
ಹೊಣೆ ಅರಿಯಲು ರಾಜ್ಯಪಾಲರಿಗೆ ಕರೆ
ನವದೆಹಲಿ, ಡಿ. 12– ಪಕ್ಷಪಾತ ಮತ್ತು ರಾಜಕೀಯ ಒತ್ತಡಗಳಿಂದ ದೂರವಾಗಿ, ಅತ್ಯಂತ ವಿವೇಚನೆಯಿಂದ ನೂತನ ಪರಿಸ್ಥಿತಿಯನ್ನು ಎದುರಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರು ಇಂದು ರಾಜ್ಯಪಾಲರಿಗೆ ಕರೆ ಇತ್ತರು.
‘ಈಗ ರಾಜ್ಯಪಾಲರ ಸ್ಥಾನ ದಿನೇ ದಿನೇ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿದೆ. ರಾಜ್ಯಪಾಲರು ಕೈಗೊಳ್ಳುವ ಹಾಗೂ ಕೈಗೊಳ್ಳದಿರುವ ಕ್ರಮಗಳು ನಿರಂತರವಾಗಿ ಸಾರ್ವಜನಿಕರ ಗಮನಕ್ಕೆ ಬಂದು, ಅನೇಕ ವೇಳೆ ಕಟು ಟೀಕೆಗಳಿಗೊಳಗಾಗುತ್ತವೆ’ ಎಂದು ರಾಷ್ಟ್ರಪತಿ ಅವರು ರಾಜ್ಯಪಾಲರ ವಾರ್ಷಿಕ ಸಭೆಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.