ವಿಮಾನಗಳ್ಳರ ವಾಪಸಾತಿ ಇಲ್ಲ ಪಾಕ್ ಪುನರ್ ಸ್ಪಷ್ಟನೆ
ನವದೆಹಲಿ, ಫೆ. 10– ಲಾಹೋರಿನಲ್ಲಿ ಭಸ್ಮ ಮಾಡಲಾದ ಭಾರತದ ಫಾಕರ್ ಫ್ರೆಂಡ್ಶಿಪ್ ವಿಮಾನವನ್ನು ಅಪಹರಿಸಿದ ಇಬ್ಬರನ್ನೂ ಭಾರತಕ್ಕೆ ವಾಪಸು ಕಳುಹಿಸಿಕೊಡುವುದಿಲ್ಲವೆಂಬ ತನ್ನ ಹಿಂದಿನ ನಿಲುವನ್ನು ಪಾಕಿಸ್ತಾನ ಇಂದು ಪುನರ್ ಸ್ಪಷ್ಟಪಡಿಸಿತು.
‘ಬಡವ– ಶ್ರೀಮಂತನ ಅಂತರ ಕಡಿಮೆ ಮಾಡುವುದಗತ್ಯ’
ಮಂಗಳೂರು, ಫೆ. 10– ‘ಈ ದೇಶ ಅತ್ಯಂತ ಪ್ರಾಚೀನ ನಾಗರಿಕತೆಯುಳ್ಳ ದೇಶ. ಆದರೆ, ಇದನ್ನು ಎಲ್ಲಾ ವಿಧದಲ್ಲೂ ಆಧುನಿಕಗೊಳಿಸುವ ಕಾರ್ಯ ನಿಮ್ಮದಾಗಿದೆ. ಬಡವ ಮತ್ತು ಶ್ರೀಮಂತರ ನಡುವಣ ಅಂತರವನ್ನು ಕಡಿಮೆಗೊಳಿಸುವುದು ಅಗತ್ಯವಾಗಿದೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನು ಎದುರಿಸ
ಬೇಕಾಗಿದೆ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.
‘ನಾವು ಇದ್ದಂತೆ ಇರಬೇಕೆ? ಪುರಾತನ ಮಾನವರಿಂದ ಆಧುನಿಕ ಮಾನವರಾಗಿ ಬದಲಾವಣೆ ಹೊಂದಬೇಕು. ನಮ್ಮ ಧರ್ಮ, ಸಂಸ್ಕೃತಿಯಲ್ಲಿನ ಒಳ್ಳೆ ಅಂಶಗಳನ್ನು ಅಂಗೀಕರಿಸಿ ಹೊಸ ಸಮಾಜ ಕಟ್ಟುವುದು ನಮ್ಮ ಗುರಿಯಾಗಿದೆ’ ಎಂದರು.
ರಸ್ತೆಯುದ್ದಕ್ಕೂ ಹಾರ್ದಿಕ ಸ್ವಾಗತ
ಹಾಸನ, ಫೆ. 10– ಸುಮಾರು ಒಂದೂವರೆ ಗಂಟೆ ಕಾಲ ತಡವಾಗಿ ಮಂಗಳೂರನ್ನು ಬಿಟ್ಟ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹಾಸನದವರೆಗೂ ದಾರಿಯುದ್ದಕ್ಕೂ ಊರುಗಳಲ್ಲಿ ಭಾರಿ ಸ್ವಾಗತ ನೀಡಲಾಯಿತು. ರಸ್ತೆ, ವಿದ್ಯುದ್ದೀಪ ಅಥವಾ ಗ್ಯಾಸ್ ದೀಪಗಳನ್ನಿಟ್ಟುಕೊಂಡು ಪ್ರಧಾನಿಗಾಗಿ ಕಾದಿದ್ದರು. ಹಾಸನಕ್ಕೆ ರಾತ್ರಿ 11 ಗಂಟೆಗೆ ತಲುಪಿದರು.
ಕಾರ್ಯಕ್ರಮದಲ್ಲಿ ಸೇರದಿದ್ದ ಪುತ್ತೂರಿಗೆ ಭೇಟಿ ಕೊಟ್ಟರು. ಪುತ್ತೂರಿನಲ್ಲಿ ಇಡೀ ಪುತ್ತೂರು ಪ್ರಧಾನಿಗೆ ಸ್ವಾಗತ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.