ರಾಜ್ಯ ಸಂಪುಟಕ್ಕೆ ಸಚಿವ ಮಹಮ್ಮದ್ ಅಲಿ ರಾಜೀನಾಮೆ
ಬೆಂಗಳೂರು, ಜ. 29– ಸಂಸ್ಥಾ ಕಾಂಗ್ರೆಸ್ ‘ಬಲಪಂಥೀಯ ಪ್ರತಿಗಾಮಿ ಪಕ್ಷಗಳೊಡನೆ’ ಮೈತ್ರಿ ಏರ್ಪಡಿಸಿಕೊಳ್ಳುವುದನ್ನು ಪ್ರತಿಭಟಿಸಿ, ರಾಜ್ಯದ ಸಾರಿಗೆ ಸಚಿವ ಶ್ರೀ ಮಹಮ್ಮದ್ ಅಲಿ ಅವರು ಇಂದು ಬೆಳಿಗ್ಗೆ ಸಚಿವ ಪದವಿಗೆ ರಾಜೀನಾಮೆ ಸಲ್ಲಿಸಿದರು.
ಅಲಿ ಅವರ ರಾಜೀನಾಮೆ ಪತ್ರ ಬೆಳಿಗ್ಗೆ ತಮ್ಮ ಕೈ ಸೇರಿದಾಗ ತಮಗೆ ಆಶ್ಚರ್ಯವಾಯಿತೆಂದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್, ‘ಸಹೋದ್ಯೋಗಿಯೊಬ್ಬರು ಬಿಟ್ಟುಹೋಗಲು ಮನಸ್ಸು ಮಾಡಿರುವಾಗ ರಾಜೀನಾಮೆ ವಾಪಸು ಪಡೆಯುವಂತೆ ಅವರನ್ನು ಬಲವಂತ ಮಾಡಲು ಹೇಗೆ ಸಾಧ್ಯ’ ಎಂದರು.
ಕೋಲಾರ ಜಿಲ್ಲೆಯ ಅನೇಕ ಪ್ರಮುಖರು ಆಡಳಿತ ಕಾಂಗ್ರೆಸ್ಸಿಗೆ
ಬೆಂಗಳೂರು, ಜ. 29– ‘ರಾಷ್ಟ್ರೀಯ ಕಾಂಗ್ರೆಸ್ನ ಧೋರಣೆಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯದಲ್ಲಿ ಪ್ರಧಾನಿಯನ್ನು ಬಲಗೊಳಿಸುವ ಉದ್ದೇಶದಿಂದ’ ಹಳೆಯ ಮೈಸೂರಿನ ಹಿರಿಯ ಕಾಂಗ್ರೆಸ್ ನಾಯಕರಲ್ಲೊಬ್ಬರಾದ ಶ್ರೀ ಜಿ.ನಾರಾಯಣಗೌಡ ಅವರ ನಾಯಕತ್ವದಲ್ಲಿ ಇಂದು, ಅವರೂ ಸೇರಿ ಕೋಲಾರ ಜಿಲ್ಲೆಯ ನಾಲ್ಕು ಮಂದಿ ಶಾಸಕರು ಸಂಸ್ಥಾ ಕಾಂಗ್ರೆಸ್ಸಿಗೆ ರಾಜೀನಾಮೆಯಿತ್ತು ಆಡಳಿತ ಕಾಂಗ್ರೆಸ್ಸಿಗೆ ಸೇರಿದರು.
ಆಡಳಿತ ಕಾಂಗ್ರೆಸ್ಸಿಗೆ ಸೇರಿದವರಿವರು: ವಿಧಾನಸಭಾ ಸದಸ್ಯರಾದ ಶ್ರೀ ಜಿ.ನಾರಾಯಣಗೌಡ, ಇ.ನಾರಾಯಣಗೌಡ ಹಾಗೂ ಬಿ.ವೆಂಕಟರಾಯಪ್ಪ, ವಿಧಾನ ಪರಿಷತ್ತಿನ ಸದಸ್ಯರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಂ.ಸಿ. ಆಂಜನೇಯ ರೆಡ್ಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.