ಯಾವ ರಾಜ್ಯಕ್ಕೂ ಕಹಿ ಇಲ್ಲದೆ ಗಡಿ– ಜಲ ವಿವಾದ ಪರಿಹಾರ: ಇಂದಿರಾ
ಮೈಸೂರು, ಫೆ. 11– ಯಾವುದೇ ರಾಜ್ಯಕ್ಕೂ ಹೆಚ್ಚು ಕಹಿ ಹಾಗೂ ತೀವ್ರ ಅಸಮಾಧಾನ ಆಗದಂತೆ ಮೈಸೂರು– ಮಹಾರಾಷ್ಟ್ರ– ಕೇರಳ ಗಡಿ ವಿವಾದವನ್ನು ಬಗೆಹರಿಸಬೇಕಾದ ಬಗ್ಗೆ ಇಂದು ಇಲ್ಲಿ ಒತ್ತಿ ಹೇಳಿದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು, ಕಾವೇರಿ ಜಲವಿವಾದದ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರ ಮಿತಿ ಕುರಿತು ಸ್ಪಷ್ಟೀಕರಿಸಿದರು.
ಆಡಳಿತ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರದ ಅಂಗವಾಗಿ ಇಂದು ಇಲ್ಲಿನ ವಿಶ್ವವಿದ್ಯಾಲಯ ಕ್ರೀಡಾ ಮೈದಾನದಲ್ಲಿ ಭಾರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಡಿ ಮತ್ತು ಜಲವಿವಾದಗಳಲ್ಲಿ ಕೇಂದ್ರ ಸರ್ಕಾರದ ಪಾತ್ರ ಹಾಗೂ ಹೊಣೆಗಾರಿಕೆ ಬಗ್ಗೆ ನೇರವಾಗಿ ಇಲ್ಲಿ ಪ್ರಸ್ತಾಪಿಸಿದರು.
ವಿವಾದದ ಸುಳಿಯಲ್ಲಿ ಸಿಕ್ಕಿರುವ ಸಂವಿಧಾನ: ವಿಭಿನ್ನ ನಿಲುವು
ನವದೆಹಲಿ, ಫೆ. 11– ಸಂವಿಧಾನ ಈಗ ಮಧ್ಯಂತರ ಚುನಾವಣೆಯ ವಿವಾದಾತ್ಮಕ ವಿಷಯವಾಗಿದೆ. ಈ ಸಂವಿಧಾನ ಜನರ ಆಶೋತ್ತರಗಳನ್ನು ಎಷ್ಟರ ಮಟ್ಟಿಗೆ ಈಡೇರಿ ಸುತ್ತದೆ ಎಂದು ಅನೇಕ ರಾಜಕೀಯ ಪಕ್ಷಗಳು ವಿವಾದ ಎಬ್ಬಿಸಿವೆ.
ಸ್ವತಂತ್ರ ಪಕ್ಷ ಮತ್ತು ಸಂಸ್ಥಾ ಕಾಂಗ್ರೆಸ್ ಹೊರತು ಉಳಿದ ಆರು ರಾಷ್ಟ್ರೀಯ ಪಕ್ಷಗಳ ಚುನಾವಣೆ ಪ್ರಣಾಳಿಕೆಗಳಲ್ಲೂ ಸಂವಿಧಾನಕ್ಕೆ ಮುಖ್ಯ ಸ್ಥಾನ. ಕೆಲವು ಪಕ್ಷಗಳು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯವೆಂದರೆ ಇನ್ನು ಕೆಲವು ಪಕ್ಷಗಳು ಹೊಸ ಸಂವಿಧಾನ ರಚಿಸುವ’ ಭರವಸೆ ನೀಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.