ವಿದೇಶಿ ಚಿನ್ನ ಹೊಂದಿದ್ದ ನಗರದ ಒಬ್ಬರಿಗೆ ಕರ್ನೂಲಿನಲ್ಲಿ ಶಿಕ್ಷೆ
ಕರ್ನೂಲ್, ಮೇ 30 – ವಿದೇಶಿ ಮುದ್ರೆಗಳಿದ್ದ 3499.2 ಗ್ರಾಂ ಚಿನ್ನವನ್ನು ಹೊಂದಿದ್ದರೆಂಬ ಆಪಾದನೆ ಮೇಲೆ ಬೆಂಗಳೂರಿನ ತ್ರಿವಿಕ್ರಮ್ ಬಿ. ರಾಮಲಿಂಗಂ ಎಂಬುವರಿಗೆ ಒಂದು ತಿಂಗಳು ಕಠಿಣ ಶಿಕ್ಷೆ ಹಾಗೂ ಸಾವಿರ ರೂ. ದಂಡ, ತಪ್ಪಿದರೆ ಮೂರು ತಿಂಗಳ ಸಾದಾ ಶಿಕ್ಷೆಯನ್ನು ಇಲ್ಲಿನ ಅಡಿಷನಲ್ ಮುನ್ಸಿಫ್ ನ್ಯಾಯಾಧೀಶರು ನಿನ್ನೆ ವಿಧಿಸಿದರು.
1974ರ ಜುಲೈ ತಿಂಗಳಿನಲ್ಲಿ ರೈಲ್ವೆ ನಿಲ್ದಾಣವೊಂದರಲ್ಲಿ ಅನಂತಪುರದ ಸುಂಕದಕಟ್ಟೆ ಅಸಿಸ್ಟೆಂಟ್ ಕಲೆಕ್ಟರ್ ಅವರು ರಾಮಲಿಂಗಂ ಅವರನ್ನು ಹಿಡಿದಿದ್ದರು.
‘ಬೆಣ್ಣೆ ಕಳ್ಳ’
ಬ್ರಿಡ್ಜ್ಪೋರ್ಟ್, ಮೇ 30 – ಕೊಲೆ ಆರೋಪಿಯೊಬ್ಬ ತನ್ನ ಮೈಗೆಲ್ಲ ಬೆಣ್ಣೆ ಬಳಿದುಕೊಂಡು ಕಳೆದ ಗುರುವಾರ ಇಲ್ಲಿನ ಸೆರೆಮನೆಯ ಕಿಟಕಿಯಿಂದ ನುಣುಚಿಕೊಂಡು ಪರಾರಿಯಾದನೆಂದು ಸೆರೆಮನೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರಿಂದ ಹಲ್ಲೆ: ನ್ಯಾಯಾಧೀಶರು, ಪೊಲೀಸರಿಗೆ ಗಾಯ
ಹೈದರಾಬಾದ್ (ಪಾಕಿಸ್ತಾನ), ಮೇ 30– ಕಾಲೇಜು ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಬಾಲಕಿಯರ ಕಾಲೇಜಿನ 80ಕ್ಕೂ ಹೆಚ್ಚು ಬಾಲಕಿಯರು ಗುರುವಾರ ಪ್ರಿನ್ಸಿಪಾಲರ ಕೊಠಡಿಗೆ ನುಗ್ಗಿ ಎರಡು ಗಂಟೆಗಳ ಕಾಲ ಕಲ್ಲುತೂರಾಟ ನಡೆಸಿ ಮೇಜು, ಕುರ್ಚಿಗಳಿಗೆ ಹಾನಿಯನ್ನುಂಟು ಮಾಡಿದರು.
ತರಗತಿಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿನಿಯರು ಬೀಸುತ್ತಿದ್ದ ಕಲ್ಲುಗಳಿಂದ ನ್ಯಾಯಾಧೀಶರೂ ಸೇರಿ ಅನೇಕ ಪೊಲೀಸರು ಗಾಯಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.