ಭ್ರಷ್ಟಾಚಾರದ ವಿರುದ್ಧ ಹೋರಾಡಲು ರಾಷ್ಟ್ರಪತಿ ಕರೆ
ನವದೆಹಲಿ, ಆಗಸ್ಟ್ 14– ಭ್ರಷ್ಟಾಚಾರ, ಕೋಮುವಾದ, ಜಾತೀಯತೆ ಮತ್ತು ರಾಜಕೀಯದಲ್ಲಿನ ಅಪರಾಧೀಕರಣದ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ರಾಷ್ಟ್ರದ ಜನತೆಗೆ ಕರೆ ನೀಡಿದರು.
ಐವತ್ತು ವರ್ಷಗಳಲ್ಲಿ ಅನೇಕ ವೈಫಲ್ಯಗಳ ನಡುವೆ ಅಪಾರ ಸಾಧನೆಯನ್ನು ಮಾಡಿಕೊಂಡು, ರಾಷ್ಟ್ರದ ಏಕತೆಯನ್ನು ಕಾಪಾಡಿಕೊಂಡು ಬಂದಿದ್ದರೂ, ಭ್ರಷ್ಟಾಚಾರ ಎಂಬುದು ನಮ್ಮ ರಾಜಕೀಯ ಮತ್ತು ಸಮಾಜವನ್ನು ತಿಂದು ಹಾಕುತ್ತಿದೆ. ಆದ್ದರಿಂದ ಅದರ ವಿರುದ್ಧ ಹೋರಾಟ ಮಾಡಬೇಕೆಂದು ಅವರು ಹೇಳಿದರು.
***
ಮಧ್ಯರಾತ್ರಿ ಮೊಳಗಿದ ಗಾಂಧಿವಾಣಿ
ನವದೆಹಲಿ, ಆಗಸ್ಟ್ 14– ಮಧ್ಯರಾತ್ರಿ 12 ಗಂಟೆಯಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಚರಿತ್ರೆಯ ಪುನರಾವರ್ತನೆ. ಐವತ್ತು ವರ್ಷಗಳ ಹಿಂದೆ ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಸ್ವಾತಂತ್ರ್ಯಗೊಳಿಸಿದ ರಾಷ್ಟ್ರಪಿತ ಗಾಂಧೀಜಿ, ನೆಹರೂ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ವೀರವಾಣಿ ಮತ್ತೆ ಮೊಳಗಿತು.
ಈ ಅವಿಸ್ಮರನೀಯ ಗಳಿಗೆ ಇಡೀ ಸಂಟ್ರಲ್ ಹಾಲ್ನಲ್ಲಿ ನೆರೆದಿದ್ದ ಸದಸ್ಯರನ್ನು ಪುಳಕಿತಗೊಳಿಸಿತು. ಸುವರ್ಣ ಸ್ವಾತಂತ್ರ್ಯೋತ್ಸವಕ್ಕೆ ಈ ಮಹಾನ್ ನಾಯಕರ ಸ್ಪೂರ್ತಿಯುತ ಭಾಷಣವೇ ನಾಂದಿಯಾಯಿತು.
ರಾಷ್ಟ್ರಪತಿ ಕೆ.ಆರ್. ನಾರಾಯಣನ್, ಪ್ರಧಾನಿ ಐ.ಕೆ. ಗುಜ್ರಾಲ್ ಮತ್ತಿತರ ಗಣ್ಯರ ಆಗಮನದ ಜತೆಗೆ ದೇಶಪ್ರೇಮ, ಭಕ್ತಿಭಾವ, ಶಂಭ್ರಮ ಸಡಗರದ ಆಚರಣೆಯ ಆರಂಭವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.