ದಳ ಮುಖಂಡರ ವಿರಸ ಅಂತ್ಯಕ್ಕೆ
ವರಿಷ್ಠರ ಯತ್ನ
ಬೆಂಗಳೂರು, ಡಿ. 28– ಜನತಾದಳದಲ್ಲಿನ ಕೆಲವು ನಾಯಕರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳು ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವ ಎಸ್.ಆರ್. ಬೊಮ್ಮಾಯಿ ಅವರು, ತಮ್ಮ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲಿದೆ ಎಂದು ಇಂದು ಇಲ್ಲಿ ನುಡಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಮತ್ತು ಕೇಂದ್ರ ಜವಳಿ ಸಚಿವ ಆರ್.ಎಲ್. ಜಾಲಪ್ಪ ಅವರೊಂದಿಗೆ ಚರ್ಚಿಸಿದ ಅವರು, ತಾವು ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾತುಕತೆ ನಡೆಸಿದುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷ ತ್ಯಜಿಸಬೇಡಿ: ಕಾಂಗ್ರೆಸ್
ನಾಯಕರಿಗೆ ಕೇಸರಿ ಮೊರೆ
ನವದೆಹಲಿ, ಡಿ. 28– ಕಾಂಗ್ರೆಸ್ಸಿನಿಂದ ಹಲವಾರು ನಾಯಕರು ಗುಂಪುಗುಂಪಾಗಿ ಪಕ್ಷ ತೊರೆದು ಹೋಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರು ‘ಪಕ್ಷ ಅಧಿಕಾರದಲ್ಲಿದ್ದಾಗ ಎಲ್ಲ ಸೌಲಭ್ಯವನ್ನು ಅನುಭವಿಸಿದವರು ಈ ಸಮಯದಲ್ಲಿ ಪಕ್ಷವನ್ನು ತೊರೆಯಬಾರದು’ ಎಂದು ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡರು.
ಪಕ್ಷ ಬಿಟ್ಟವರ ಬಗ್ಗೆ ನನ್ನ ಆಕ್ಷೇಪ ಇಲ್ಲ. ಅವರು ಮತ್ತೆ ನಮ್ಮ ಪಕ್ಷಕ್ಕೆ ಬಂದೇ ಬರುತ್ತಾರೆ ಎಂಬುದು ಗೊತ್ತಿದೆ. ಆದರೆ ಪಕ್ಷ ಅಧಿಕಾರದಲ್ಲಿದ್ದಾಗ ಎಲ್ಲ ಸೌಲಭ್ಯಗಳನ್ನು ಅನುಭವಿಸಿದವರು ಈಗ ಪಕ್ಷ ತೊರೆಯುವುದು ನ್ಯಾಯ ಸಮ್ಮತವಲ್ಲ. ಪಕ್ಷದಲ್ಲೇ ಉಳಿಯಬೇಕೆಂದು ಪಕ್ಷವನ್ನು ತೊರೆಯುತ್ತಿರುವ ನಾಯಕರಿಗೆ ಕೇಸರಿ ಅವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.