ADVERTISEMENT

25 ವರ್ಷಗಳ ಹಿಂದೆ: ಶನಿವಾರ, 5–4–1997

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 19:30 IST
Last Updated 4 ಏಪ್ರಿಲ್ 2022, 19:30 IST
   

ಯುಗಾದಿ ದಿನ ರಾಜ್ಯದಲ್ಲಿ 9 ಹೊಸ ಜಿಲ್ಲೆಗಳ ಉದಯ

ಬೆಂಗಳೂರು, ಏ. 4– ರಾಜ್ಯದ ಜನತೆಗೆ ಯುಗಾದಿಯ ಕೊಡುಗೆಯಾಗಿ ರಾಜ್ಯಕ್ಕೆ ಹೊಸ ಒಂಬತ್ತು ಜಿಲ್ಲೆಗಳನ್ನು ರಚಿಸುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿರುವ ರಾಜ್ಯ ಸಚಿವ ಸಂಪುಟ ಸಭೆ ಹೊಸ ಜಿಲ್ಲೆಗಳು ಯಾವುವು ಎಂಬುದನ್ನು ಪ್ರಕಟಿಸುವ ಅಧಿಕಾರವನ್ನು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರಿಗೆ ಇಂದು ಇಲ್ಲಿ ನೀಡಿದೆ.

ಮುಖ್ಯಮಂತ್ರಿ ಅವರು ಯುಗಾದಿ ದಿನ ಪ್ರಕಟಿಸುವ ಪಟ್ಟಿಯಲ್ಲಿ ಚಾಮರಾಜನಗರ, ಉಡುಪಿ, ಗದಗ, ಹಾವೇರಿ, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಚಿಕ್ಕೋಡಿ ಅಥವಾ ಗೋಕಾಕ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಯಾದಗಿರಿ ಅಥವಾ ಭೀಮರಾಯನಗುಡಿ ಅಥವಾ ಸುರಪುರ (ಈ ಮೂರರ ಪೈಕಿ ಒಂದು ಜಿಲ್ಲೆಯಾಗಿ ರಚನೆಯಾಗಲಿದೆ) ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

ಮುಂದುವರಿದ ಅನಿಶ್ಚಿತ ಸ್ಥಿತಿ: ಕಾಂಗೈ– ರಂಗ ಬಿಗಿ ನಿಲುವು, ಬಸು– ಕೇಸರಿ ಚರ್ಚೆ

ನವದೆಹಲಿ, ಏ. 4– ಸಂಯುಕ್ತ ರಂಗ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ತನ್ನ ನಿಲುವನ್ನು ಪುನರ್‌ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿರುವ ಬಗೆಗೆ ಅಧಿಕೃತವಾಗಿ ಉಭಯ ಪಕ್ಷಗಳ ನಾಯಕರ ನಡುವಣ ಮಾತುಕತೆಯು ಆರಂಭವಾಗದೇ ಇರುವ ಕಾರಣ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಸರ್ಕಾರದ ಉಳಿವಿಗೆ ಬಂದಿರುವ ಗಂಡಾಂತರ ಇನ್ನೂ ಅನಿಶ್ಚಿತ ವಾತಾವರಣದಲ್ಲಿಯೇ ಮುಳುಗಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಅವರು ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿದ್ದು, ಅವರೂ ಕಾಂಗ್ರೆಸ್‌ ಅಧ್ಯಕ್ಷ ಸೀತಾರಾಂ ಕೇಸರಿ, ವಿ.ಪಿ.ಸಿಂಗ್‌ ಮುಂತಾದವರನ್ನು ಭೇಟಿ ಮಾಡಿ ಸಂಯುಕ್ತ ರಂಗ ಸರ್ಕಾರದ ಉಳಿವಿಗೆ ಸತತ ಪ್ರಯತ್ನ ನಡೆಸಿರುವುದು ಇಲ್ಲಿನ ಇಂದಿನ ವಿಶೇಷ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.