
ಇಸ್ಲಾಮಾಬಾದ್, ಡಿ. 10 (ಪಿಟಿಐ)– ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಕುಟುಂಬದ 19 ಮಂದಿಯನ್ನು ಇಂದು ಪಾಕಿಸ್ತಾನದ ಸೇನಾ ಆಡಳಿತವು, ಸೌದಿ ಅರೇಬಿಯಾಕ್ಕೆ ಗಡಿಪಾರು
ಮಾಡಿದೆ.
ಒಂದು ವರ್ಷಕ್ಕೂ ಹಿಂದೆ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಅಧಿಕಾರ ಕಳೆದುಕೊಂಡು ವಿಮಾನ ಅಪಹರಣ ಮತ್ತು ಕೆಲವು ಭ್ರಷ್ಟಾಚಾರದ ಹಗರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಷರೀಫ್ ಅವರಿಗೆ ಪಾಕಿಸ್ತಾನದ ಅಧ್ಯಕ್ಷ ರಫೀಖ್ ತರಾರ್ ಕ್ಷಮಾದಾನ ನೀಡಿದ್ದಾರೆ. ಪಾಕಿಸ್ತಾನದ ಮಿತ್ರರಾಷ್ಟ್ರವಾಗಿರುವ ಸೌದಿ ಅರೇಬಿಯಾ ನಡೆಸಿರುವ ಮಧ್ಯಸ್ಥಿಕೆಯಿಂದ ಷರೀಫ್ ಅವರಿಗೆ ಈ ಜೀವದಾನ ದೊರೆತಿದೆ.
ಕಿಕ್ಕಿರಿದ ಅಭಿಮಾನಿಗಳ ಸಮ್ಮುಖದಲ್ಲಿ ‘ಧನ್ಯಮಿಲನ’
ಬೆಂಗಳೂರು, ಡಿ. 10– ವೀರಪ್ಪನ್ ಒತ್ತೆಯಾಳಾಗಿ 108 ದಿನಗಳ ವನವಾಸ ಅನುಭವಿಸಿ ನಾಡಿಗೆ ವಾಪಸಾದ ಕನ್ನಡದ ಮೇರುನಟ ಡಾ. ರಾಜ್ಕುಮಾರ್, ಅವರ ಸುರಕ್ಷಿತ ಬಿಡುಗಡೆಗೆ ಶ್ರಮಿಸಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂದು ಇಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕರ್ನಾಟಕ ಚಲನಚಿತ್ರೋದ್ಯಮ ಕ್ರಿಯಾ ಸಮಿತಿಯು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಕರತಾಡನದ ನಡುವೆ ಡಾ. ರಾಜ್, ಎಸ್.ಎಂ. ಕೃಷ್ಣ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.