l ತೆರೆಯದ ಕೆಇಬಿ ಉಗ್ರಾಣ – ಕತ್ತಲೆಯಲ್ಲಿ ನಿವಾಸಿಗಳು
ರಾಯಚೂರು, ಜುಲೈ 6 – ಕರ್ನಾಟಕ ವಿದ್ಯುತ್ ಮಂಡಲಿಯ (ಕೆಇಬಿ) ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಅನೇಕ ಪ್ರದೇಶಗಳಲ್ಲಿ ಕೆಟ್ಟಿರುವ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸಲು ಕಳೆದ 40 ದಿನಗಳಿಂದ ಮುಚ್ಚಿರುವ ವಿಭಾಗೀಯ ಉಗ್ರಾಣವು ಅಡ್ಡಿಯಾಗಿದ್ದು, ಅಸಂಖ್ಯಾತ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಕಳೆದ 17 ವರ್ಷಕ್ಕಿಂತ ಹೆಚ್ಚು ಕಾಲ ಇಲ್ಲಿನ ವಿಭಾಗೀಯ ಉಗ್ರಾಣದಲ್ಲಿದ್ದ ತಮಗೆ ಜ್ಯೂನಿಯರ್ ಎಂಜಿನಿಯರ್ ಹುದ್ದೆ ನೀಡಿ ಗಂಗಾವತಿ ವಿಭಾಗಕ್ಕೆ ವರ್ಗ ಮಾಡಿದ ಕೆಇಬಿ ಆದೇಶಕ್ಕೆ ತಡಯಾಜ್ಞೆ ತಂದಿರುವ ಉಗ್ರಾಣಿಕ ನರ್ಸಪ್ಪ ಇದುವರೆಗೆ ಬೇರೆಯವರಿಗೆ ಅಧಿಕಾರ (ಚಾರ್ಜ್) ವಹಿಸಿಕೊಟ್ಟಿಲ್ಲ. ಆದರೆ ವರ್ಗಾವಣೆ ಆದೇಶದೊಂದಿಗೆ ಅವರನ್ನು ರಿಲೀವ್ ಮಾಡಿರುವುದರಿಂದ ಉಗ್ರಾಣದ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
l ಜನತಾದಳ ಅಧ್ಯಕ್ಷರಾಗಿ ಶರದ್ ಯಾದವ್ ಆಯ್ಕೆ
ನವದೆಹಲಿ, ಜುಲೈ 6 (ಯುಎನ್ಐ) – ತೀವ್ರ ವಿವಾದಕ್ಕೆ ಗುರಿಯಾಗಿ ಕೊನೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆದ ಜನತಾದಳದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ, ಶರದ್ ಯಾದವ್ ಅವರು 691 ಮತಗಳನ್ನು ಪಡೆಯುವ ಮೂಲಕ ಭಾರಿ ಬಹುಮತದೊಂದಿಗೆ ತಮ್ಮ ಪ್ರತಿಸ್ಪರ್ಧಿ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಸೋಲಿಸಿ ಇಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 758 ಮತಗಳಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಕೇವಲ 58 ಮತಗಳು ಮಾತ್ರ ದೊರೆತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.