ಪಾಕ್ ಜೊತೆ ಭಾರತದ ನೇರ ಸಂಪರ್ಕ
ನವದೆಹಲಿ, ಏ. 4– ಭಾರತ ಮತ್ತು ಪಾಕಿಸ್ತಾನಗಳ ನಡುವಣ ಬಾಂಧವ್ಯವನ್ನು ಎಂದಿನಂತೆ ಸುಮುಖಗೊಳಿಸುವ ವಿಚಾರದಲ್ಲಿ ಭಾರತವು ಪಾಕ್ ಜತೆ ನೇರ ಸಂಪರ್ಕ ಪಡೆದಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಬಹಿರಂಗ ಪಡಿಸಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಬಗ್ಗೆ ಚರ್ಚೆಗೆ ಉತ್ತರಿಸುತ್ತಿದ್ದ ಅವರು ಈ ಸಂಪರ್ಕದ ಸ್ವರೂಪ ಏನೆಂಬುದನ್ನು ಸ್ಪಷ್ಟಪಡಿಸಲಿಲ್ಲ.
ಸರ್ಕಾರಿ ಉದ್ಯಮಗಳಲ್ಲಿ ದೊಡ್ಡ ಹುದ್ದೆಗಳಿಗೆ ನೇಮಕದಲ್ಲಿ ಹರಿಜನ–ಗಿರಿಜನರ ಬಗ್ಗೆ ಅಸಡ್ಡೆ
ನವದೆಹಲಿ, ಏ. 4– ಸರ್ಕಾರಿ ಉದ್ಯಮಗಳ ಕ್ಷೇತ್ರದ ಉನ್ನತ ಹುದ್ದೆಗಳಲ್ಲಿ ಹರಿಜನ– ಗಿರಿಜನರಿಗೆ ನೀಡಿರುವ ಪ್ರಾತಿನಿಧ್ಯ ತೀರ ಅಲ್ಪ ಎಂದು ರಾಜ್ಯಸಭೆಯಲ್ಲಿ ಇಂದು ಕೇಂದ್ರ ಸರ್ಕಾರ ಒಪ್ಪಿಕೊಂಡು ಆ ಬಗ್ಗೆ ತನ್ನ ಆತಂಕ ವ್ಯಕ್ತಪಡಿಸಿತು.
ಎಸ್.ಕುಮಾರನ್ ಮತ್ತಿತರರಿಗೆ ಉತ್ತರ ನೀಡಿದ ಕಂದಾಯ ಮತ್ತು ವಿಮೆ ಸ್ಟೇಟ್ ಸಚಿವ ಕೆ.ಆರ್.ಗಣೇಶ್ ಅವರು 1970ರಲ್ಲಿ ಪರಿಶಿಷ್ಟ ಜನಾಂಗಗಳಿಗೆ ಮೊದಲ ದರ್ಜೆ ಹುದ್ದೆಗಳಲ್ಲಿ ಕೇವಲ ಶೇ 0.56 ರಷ್ಟು ಪ್ರಾತಿನಿಧ್ಯವಿತ್ತು. ಗಿರಿಜನರಿಗೆ ಶೇ 0.07 ರಷ್ಟು ಪ್ರಾತಿನಿಧ್ಯವಿತ್ತು. 2ನೇ ದರ್ಜೆ ಹುದ್ದೆಗಳಲ್ಲಿ ಕ್ರಮವಾಗಿ ಶೇ 0.74 ಮತ್ತು ಶೇ 0.07 ರಷ್ಟು ಪ್ರಾತಿನಿಧ್ಯವಿತ್ತು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.