ಪಾಕ್ ಜೊತೆ ಬಾಂಗ್ಲಾದೇಶ ಬಾಂಧವ್ಯ ಶಾಶ್ವತವಾಗಿ ಭಗ್ನ: ಮುಜೀಬ್
ಢಾಕಾ, ಜ. 10– ಬಾಂಗ್ಲಾದೇಶವು ಪಾಕಿಸ್ತಾನದಿಂದ ಶಾಶ್ವತವಾಗಿ ಬೇರ್ಪಟ್ಟಿದೆ. ಇವೆರಡು ದೇಶಗಳ ನಡುವೆ ರಾಜಕೀಯ ಸಂಪರ್ಕ ಭಗ್ನಗೊಂಡಿದ್ದು, ಸಂಪರ್ಕ ಪುನರ್ಸ್ಥಾಪಿಸುವುದು ಇನ್ನು ಸಾಧ್ಯವೇ ಇಲ್ಲ ಎಂದು ಷೇಖ್ ಮುಜೀಬುರ್ ರಹಮಾನ್ ಇಲ್ಲಿ ಘೋಷಿಸಿದರು.
ಅವರು ಸ್ವತಂತ್ರ ಬಾಂಗ್ಲಾ ದೇಶದ ಉದಯವನ್ನು ಸಾರ್ವಜನಿಕವಾಗಿ ಘೋಷಿಸಿದರು.
ವಿಜಯೋತ್ಸಾಹದಿಂದ ಇಂದು ತಾಯ್ನಾಡಿಗೆ ಮರಳಿದ ಕೂಡಲೇ ರೇಸ್ಕೋರ್ಸ್ ಮೈದಾನದಲ್ಲಿ ಸುಮಾರು ಐವತ್ತು ಲಕ್ಷ ಮಂದಿಯ ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ’ಪಾಕಿಸ್ತಾದ ಜತೆ ಯಾವುದಾದರೊಂದು ಬಗೆಯ ಸಂಪರ್ಕ ಇಟ್ಟುಕೊಂಡಿರಲು ಅಧ್ಯಕ್ಷ ಭುಟ್ಟೋ ತಮ್ಮನ್ನು ರಾವಲ್ಪಿಂಡಿಯಿಂದ ಹೊರಡುವ ಮುನ್ನ ಕೋರಿದರು‘ ಎಂದು ತಿಳಿಸಿದರು.
ಭರವಸೆ ಈಡೇರಿಸಿದ ತೃಪ್ತಿ: ಇಂದಿರಾ ವರ್ಣನೆ
ನವದೆಹಲಿ, ಜ. 10– ಷೇಖ್ ಮುಜೀಬುರ್ ರಹಮಾನರು ತಮ್ಮ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿ ವಿಜಯಶಾಲಿಯಾಗಿ ಹಿಂದಿರುಗಿರುವ ಈ ದಿನ ಅತ್ಯಂತ ಸಂತೋಷದ ದಿನವೆಂದು ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ಘೋಷಿದರು.
ದೆಹಲಿ ದಂಡು ಪ್ರದೇಶದಲ್ಲಿನ ಪರೇಡ್ ಮೈದಾನದಲ್ಲಿ ಷೇಖ್ ಮುಜೀಬರ್ ರಸಮಾನರನ್ನು ಸ್ವಾಗತಿಸಲು ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಇಂದಿರಾಗಾಂಧಿಯವರು ’ಷೇಖ್ ಮುಜೀಬುರ್ ರಹಮಾನರು ದೈಹಿಕವಾಗಿ ಜೈಲಿನಲ್ಲಿ ಬಂಧಿಯಾಗಿದ್ದರೂ ಅವರ ಆತ್ಮ ಸ್ವತಂತ್ರವಾಗಿತ್ತು. ಅದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವಂತೆ ಬಾಂಗ್ಲಾ ದೇಶ ಜನತೆಯ ಧೈರ್ಯವೇ ಅವರಿಂದು ಸ್ವತಂತ್ರರಾಗಿಲು ಕಾರಣ’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.