ADVERTISEMENT

ನುಡಿ ನಮನ | ರಘು ಎಂಬ ಬೆರಗು

ಗಾಣಧಾಳು ಶ್ರೀಕಂಠ
Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಮೈಸೂರಿನಲ್ಲಿ ‘ಉಳುಮೆ ಪ್ರತಿಷ್ಠಾನ’ ಭಾನುವಾರ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ಆಹಾರ ತಜ್ಞ ಕೆ.ಸಿ.ರಘು ಮಾತನಾಡಿದರು. ಬೆಟ್ಟಯ್ಯ ಕೋಟೆ, ಹೊಸೂರು ಕುಮಾರ್‌, ಟಿ.ಜಿ.ಎಸ್‌.ಅವಿನಾಶ್‌ ಇದ್ದಾರೆ
ಮೈಸೂರಿನಲ್ಲಿ ‘ಉಳುಮೆ ಪ್ರತಿಷ್ಠಾನ’ ಭಾನುವಾರ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ಆಹಾರ ತಜ್ಞ ಕೆ.ಸಿ.ರಘು ಮಾತನಾಡಿದರು. ಬೆಟ್ಟಯ್ಯ ಕೋಟೆ, ಹೊಸೂರು ಕುಮಾರ್‌, ಟಿ.ಜಿ.ಎಸ್‌.ಅವಿನಾಶ್‌ ಇದ್ದಾರೆ   

ಸುಮಾರು 17 ವರ್ಷಗಳ ಹಿಂದೆ, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುತ್ತಿದ್ದ ‘ಸಾವಯವ ಸಂತೆ'ಯಲ್ಲಿ ಗೆಳೆಯರೆಲ್ಲ ಗುಂಪು ಕಟ್ಟಿಕೊಂಡು ಹರಟುತ್ತಿದ್ದೆವು. ಅಲ್ಲಿ ಕಂಡ ಹೊಸ ಮುಖವೇ ಕೆ.ಸಿ.ರಘು.

ಅಂದು ಝೆನ್ ಕಥೆ ಹೇಳುತ್ತಾ, ನಗಿಸುತ್ತ, ನಗುತ್ತಲೇ ಪರಿಚಯವಾದರು ರಘು. ಮೊದಲ ಭೇಟಿಯ ಮಾತುಗಳೇ ಅವರಲ್ಲಿದ್ದ ‘ಜ್ಞಾನದ ಅಗಾಧತೆ‘ಯನ್ನು ತೆರೆದಿಟ್ಟಿದ್ದವು. ಆ ಮಾತುಗಳು ಕೂಡ ಝೆನ್ ಕಥೆಗಳಂತೆ, ಮೊದಲು ನಗು ಉಕ್ಕಿಸಿ, ನಂತರ ಚಿಂತನೆಯ ಆಳಕ್ಕೆ ಇಳಿಸುತ್ತಿದ್ದವು. ಮುಂದೆ ಭೇಟಿಯಾದಾಗಲ್ಲೆಲ್ಲ ಹೀಗೆಯೇ ನಗುತ್ತಾ, ನಗಿಸುತ್ತಾ ನಮಗೆಲ್ಲರಿಗೂ 'ಜ್ಞಾನದ ರಸಗವಳ' ನೀಡುತ್ತಿದ್ದರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಲ್ಮನೆಯ ಕೃಷಿಕ ದಂಪತಿ ತಂದೆ ಚಂದ್ರೇಗೌಡ– ಕೆಂಚಮ್ಮ ದಂಪತಿ ಪುತ್ರ ರಘು. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲೇ ಕಲಿತಿದ್ದು. ಮುಂದೆ ಚಿಕ್ಕಮಗಳೂರು ಜೂನಿಯರ್ ಕಾಲೇಜಿನಲ್ಲಿ ಪ್ರೌಢಶಿಕ್ಷಣ, ಅಲ್ಲಿಯ ಐಡಿಎಸ್‌ಜಿ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪೂರೈಸಿದರು. ಮೈಸೂರು ಸಿಎಫ್‌ಟಿಆರ್‌ಐನಲ್ಲಿ ಆಹಾರ ಸಂರಕ್ಷಣೆ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ಓದಿನ ನಂತರ ಬೆಂಗಳೂರಿನಲ್ಲಿ ಆಹಾರ ಪರೀಕ್ಷೆಯ ಸಣ್ಣ ಲ್ಯಾಬೊರೇಟರಿಯಲ್ಲಿ  ₹800 ವೇತನಕ್ಕೆ ಕೆಲಸಕ್ಕೆ ಸೇರಿದರು. ಕೆಲವೇ ವರ್ಷಗಳಲ್ಲಿ ಅವರೇ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸುವ 'ಪ್ರಿಸ್ಟೀನ್ ಲ್ಯಾಬೊರೇಟರಿ' ತೆರೆದರು. 

ADVERTISEMENT

1992ರಲ್ಲಿ ‘ಪ್ರಿಸ್ಟೀನ್‌ ಆರ್ಗಾನಿಕ್ಸ್‌’ ಎಂಬ ಸಾವಯವ ಆಹಾರ ಉತ್ಪನ್ನ ತಯಾರಿಕೆ ಕಂಪನಿ ಸ್ಥಾಪಿಸಿದರು. ಸಿರಿಧಾನ್ಯಗಳಿಂದ ಬ್ರೆಡ್‌, ಬಿಸ್ಕತ್ತು, ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ತಯಾರಿಸಿ ಮಾರಾಟ ಆರಂಭಿಸಿದರು. ಸಿರಿಧಾನ್ಯಗಳ ಹೊಸ ಬ್ರಾಂಡ್ ಹೊರತಂದರು. ಬಹುಶಃ ಇಡೀ ಭಾರತದಲ್ಲಿ ಸಿರಿಧಾನ್ಯಗಳ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ಮೊದಲಿಗರಲ್ಲಿ ರಘು ಅವರೂ ಒಬ್ಬರಿದ್ದರಿರಬಹುದು.

ರಘು ಅವರಿಗೆ ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ಕುರಿತು ತುಂಬ ಸ್ಪಷ್ಟತೆ ಇತ್ತು. ಈ ಧಾನ್ಯಗಳ ಉತ್ಪಾದನೆ ಪ್ರಮಾಣ, ಬಳಸುವ ವಿಧಾನ, ಸರ್ಕಾರ ಹೇಗೆ ಜನರಿಗೆ ಇವುಗಳನ್ನು ತಲುಪಿಸಬಹುದು ಎಂಬುದನ್ನು ನನ್ನಂಥ ಮಾಧ್ಯಮದ ಗೆಳೆಯರೊಂದಿಗೆ ಮಾನಾಡುತ್ತಿದ್ದರು. ಕೆಲವು ಭಾಷಣಗಳಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದನ್ನು ಕೇಳಿದ ನೆನಪು.

ಕೃಷಿ , ಆಹಾರ, ರಾಜಕೀಯ, ವಾಣಿಜ್ಯ, ತರ್ಕ‌ಶಾಸ್ತ್ರ, ಸಾಹಿತ್ಯ, ಸಂಗೀತ, ಉಪನಿಷತ್, ಜಾಗತಿಕ ವಿದ್ಯಮಾನಗಳು, ವೈದ್ಯಕೀಯ ಕ್ಷೇತ್ರ... ಹೀಗೆ ಹಲವು ಕ್ಷೇತ್ರಗಳ ಬಗ್ಗೆ ರಘು ಅಧ್ಯಯನ ಮಾಡಿದ್ದರು. ಝೆನ್, ಬುದ್ಧಿಸಂ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರು. ಆರೋಗ್ಯ–ಆಹಾರ ಸಂಬಂಧ, ಆಹಾರ ರಾಜಕೀಯದ ಬಗ್ಗೆ ಅಪಾರ ಜ್ಞಾನವಿತ್ತು. ಎಲ್ಲವೂ ಅಪ್‌ಡೇಟೆಡ್‌ ಮಾಹಿತಿಗಳೇ. ಎಲ್ಲವೂ ಸ್ಪಷ್ಟ ಮತ್ತು ನಿಖರ. ಯಾವುದೇ ವಿಚಾರಗಳಾಗಲಿ, ವೈಜ್ಞಾನಿಕ ತಳಹದಿಯೊಂದಿಗೆ ವಿಶ್ಲೇಷಿಸಿ, ಅಂಕಿ ಅಂಶಗಳೊಂದಿಗೆ ಅಚ್ಚುಕಟ್ಟಾಗಿ ಮಂಡಿಸುತ್ತಿದ್ದರು.  

‘ನೀವು ಬಹಳ ಬುದ್ಧಿವಂತರು ಸರ್. ಬಹುಶಃ ಚಿಕ್ಕವರಿಂದಲೂ ಚೆನ್ನಾಗಿ ಓದಿದ್ದೀರಿ ಅಲ್ಲವಾ‘ ಅಂತ ಒಮ್ಮೆ ರಘು ಅವರನ್ನು ಕುತೂಹಲದಿಂದ ಕೇಳಿದ್ದೆ. ಅದಕ್ಕವರು ‘ನಾನು ಪ್ರೈಮರಿ ಸ್ಕೂಲ್ ಓದಿದ್ದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ. ಶಾಲೆಗೆ ಹೋಗುತ್ತಿದ್ದದೇ ಕಡಿಮೆ’ ಅಂತ ನಕ್ಕಿದ್ದರು. ಇದೇ ವೇಳೆ, ಶಾಲಾ ದಿನಗಳಲ್ಲಿಯೇ ಓದುವ ಅಭ್ಯಾಸವಿತ್ತು ಎಂದು ಹೇಳುತ್ತಿದ್ದರು. ಕಾಲೇಜು ದಿನಗಳಲ್ಲಿ ಚಿಕ್ಕಮಗಳೂರಿನ ಸಾರ್ವಜನಿಕ ಗ್ರಂಥಾಲಯ ಅವರ ನಿತ್ಯದ ಅಧ್ಯಯನ ತಾಣವಾಗಿತ್ತಂತೆ. ಹಾಗಾಗಿ, ಅಕಾಡೆಮಿಕ್‌ ಆಚೆಗಿನ ಓದು, ತಜ್ಞರ ಒಡನಾಟ, ಅಧ್ಯಯನ, ದೇಶ–ವಿದೇಶಗಳ ಸುತ್ತಾಟಗಳು ರಘು ಅವರನ್ನು ಈ ಹಂತಕ್ಕೆ ಬೆಳೆಸಿರಬೇಕು.

ರಘು ಅವರ ಇಷ್ಟೆಲ್ಲ, ಚಿಂತನೆ, ಜ್ಞಾನದ ಹಿಂದೆ ಇದ್ದಿದ್ದು ಅವರಲ್ಲಿದ್ದ ಪುಸ್ತಕ ಪ್ರೇಮ. ಅವರ ಮನೆಯಲ್ಲಿ ಸಾವಿರಾರು ಪುಸ್ತಕಗಳ ಭಂಡಾರವೇ ಇತ್ತು. ಒಮ್ಮೆ ನಾನು, ನನ್ನ ಶ್ರೀಮತಿ ಆ ಭಂಡಾರ ಕಂಡು ಚಕಿತರಾಗಿದ್ದೆವು. ಪುಸ್ತಕಗಳನ್ನು ಓದುವ ಜೊತೆಗೆ, ಆಸಕ್ತರಿಗೆ, ಸಂಘ–ಸಂಸ್ಥೆಗಳಿಗೆ ಪುಸ್ತಕಗಳನ್ನು ಉದಾರವಾಗಿ ನೀಡುತ್ತಿದ್ದರು.

‘ಲೋಕಲ್‌ನಿಂದ ಗ್ಲೋಬಲ್‌ವೆರೆಗೆ’ ಎಲ್ಲ ಪತ್ರಿಕೆಗಳನ್ನೂ ಓದುತ್ತಿದ್ದರು. ಹಲವಾರು ಅಂತರಾಷ್ಟ್ರೀಯ ಜರ್ನಲ್‌ಗಳ ಆನ್‌ಲೈನ್‌ ಆವೃತ್ತಿಗಳಿಗೆ ಚಂದಾದಾರರಾಗಿದ್ದರು. ದೇಶ–ವಿದೇಶಗಳ ಖ್ಯಾತ ಲೇಖಕರ ಹೆಸರು, ಅವರ ಕೃತಿಗಳು, ಅವುಗಳಲ್ಲಿನ ಪ್ರಮುಖ ಸಾಲುಗಳು.. ಎಲ್ಲವೂ ಅವರ ನಾಲಿಗೆಯ ತುದಿಯಲ್ಲಿರುತ್ತಿದ್ದವು. 

ದೇಶಗಳನ್ನೂ ಸುತ್ತುತ್ತಾ, ಕೋಶಗಳನ್ನೂ ಓದುತ್ತಿದ್ದ ರಘು, ಅನುಭವಗಳನ್ನು ಆಸಕ್ತರಿಗೆ ದಾಟಿಸುತ್ತಿದ್ದರು. ಅವರೊಂದಿಗೆ ತುಸು ಹೊತ್ತು ಮಾತಾಡಿದರೂ‌ ಸಾಕು, ಹಲವು ಪುಸ್ತಕಗಳ ರೆಫರೆನ್ಸ್ ಸಿಗುತ್ತಿತ್ತು. ಮಾತಿನ ನಡುವೆ ವಿಷಯ–ಸಂದರ್ಭಕ್ಕೆ ಅನುಸಾರವಾಗಿ ಕವಿ ಸಾಲುಗಳು, ಲೇಖಕರ ಮಾತುಗಳು ಚಿಂತಕರ ನುಡಿಗಟ್ಟುಗಳನ್ನು ಪೋಣಿಸುತ್ತಿದ್ದರು. ಮಾತು ಮುಗಿಸುವುದರೊಳಗೆ ಎದುರಿಗಿದ್ದವರು ಒಂದಾದರೂ ಪುಸ್ತಕ ಓದಲೇಬೇಕೆಂಬ ನಿರ್ಧಾರಕ್ಕೆ ಬರುತ್ತಿದ್ದರು. ಹಾಗಿತ್ತು, ಅವರಲ್ಲಿನ ಪುಸ್ತಕ ಓದಿಸುವ ಗುಣ.

ಇವರಷ್ಟು ಸರಳವಾಗಿ ಕನ್ನಡದಲ್ಲಿ ಆಹಾರ ವಿಜ್ಞಾನವನ್ನು ಅರ್ಥಮಾಡಿಸಿದವರು ತೀರಾ ಕಡಿಮೆ. ತಮ್ಮ ಜ್ಞಾನದ ಅರಿವನ್ನು ಸಮಾಜದ ಏಳಿಗೆಗಾಗಿ ಬಳಸಿಕೊಳ್ಳಲು ತವಕಿಸುಕಿಸುತ್ತಿದ್ದ ಅವರು, ಕೃಷಿಕ ಪರ ವಿಚಾರಗಳಲ್ಲಿ ನೆರವಿನ ಹಸ್ತಚಾಚಲು ಸದಾ ಮುಂದು. ಅನೇಕ ಕೃಷಿ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಸಹಾಯ ಮಾಡಿ, ಸಂಭಾವನೆಯನ್ನೂ ಪಡೆಯದೆ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ ಉದಾಹರಣೆಗಳು ಸಾಕಷ್ಟಿವೆ.

ತಮ್ಮ ಕಂಪನಿಯ ಸಾವಯವ ಪದಾರ್ಥಗಳ ಬಗ್ಗೆ ರಘು ಯಾವತ್ತೂ ‘ಪ್ರಚಾರ‘ ಮಾಡಲಿಲ್ಲ. ಬದಲಿಗೆ ಎಷ್ಟೋ ಪರಿಚಿತರ ಮಕ್ಕಳಿಗೆ ತಮ್ಮ ಸಾವಯವ ಉತ್ಪನ್ನಗಳನ್ನು ಉಚಿತವಾಗಿ ನೀಡಿ, ‘ಮಕ್ಕಳು ಚೆನ್ನಾಗಿ ಬೆಳೆಯಲಿ’ ಎಂದು ಹರಸಿದ್ದರು.

ಅವರಲ್ಲಿನ ಮಾಹಿತಿ, ಒಳನೋಟಗಳನ್ನು ಕಂಡು ಬೆರಗಾಗಿ, ಪುಸ್ತಕ ಬರೆಯಿರಿ ಎಂದು ಒತ್ತಾಯಿಸಿದಾಗ ಪ್ರಕಟಣೆ ಕಂಡಿದ್ದು - 'ತುತ್ತು ತತ್ವ', 'ಆಹಾರ ರಾಜಕೀಯ' ಮತ್ತು 'ರಸ ತತ್ವ' ಕೃತಿಗಳು.

ಶಿಸ್ತುಬದ್ಧ ಜೀವನ, ಅಗಾಧ ಜ್ಞಾನ, ಸಾಮಾಜಿಕ ಕಳಕಳಿ.. ಸದಾ ಲವಿಲವಿಕೆಯಿಂದ ಇರುತ್ತಿದ್ದ ರಘು ಅವರಿಗೆ ಅದ್ಯಾವ ಮಾಯದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತೋ ತಿಳಿಯದು. ಸೋಂಕು ತಗುಲಿದ್ದರೂ, ಆಪ್ತರಿಗೂ ಸುದ್ದಿ ಕೊಡದೇ ವರ್ಷಕಾಲ ರೋಗದ ಜೊತೆ ಹೋರಾಡಿದ್ದರು. ತಿಂಗಳ ಹಿಂದೆ ಚೇತರಿಸಿಕೊಂಡು, ಮತ್ತೆ ಲವಲವಿಕೆಯಿಂದ ಎಲ್ಲರಿಗೂ ಲಭ್ಯವಾದರು. ಆ ಚೇತರಿಕೆ ಮುಂದುವರಿಯಲಿಲ್ಲ. ರಘು, ಅ.15ರಂದು ನಮ್ಮನ್ನು ಅಗಲಿದರು. ಆಹಾರ, ಆರೋಗ್ಯ, ವಿಷಮುಕ್ತ ಕೃಷಿ ಕುರಿತು ಸಂದೇಹಗಳಿಗೆ ತಕ್ಷಣವೇ ಪರಿಹಾರ ಕೊಡುತ್ತಿದ್ದ ಅವರೀಗ ಭೌತಿಕವಾಗಿ ಇಲ್ಲ. ಜ್ಞಾನ ದೇಗುಲದ ಬಾಗಿಲೊಂದು ಮುಚ್ಚಿದಂತೆ ಭಾಸವಾಗುತ್ತಿದೆ.

ಡಾ.ಕೆ.ಸಿ. ರಘು
ಧಾರವಾಡದ ಇನಸ್ಟಿಟ್ಯೂಟ್‌ ಆಫ್‌ ಎಂಜನೀಯರ್ಸ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹಾರ ತಜ್ಞ ಕೆ.ಸಿ.ರಘು ಮಾತನಾಡಿದರು. ಹರ್ಷವಂತ ಶೀಲವಂತರ ಹಾಗೂ ದಿವಾಕರ ಹೆಗಡೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.