ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ ‘ಭಾವ’ ಎಂದೇಕವಿ ಮನೆ ಮಾತಾಗಿದ್ದ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಸೇರಿದಂತೆ ಸಂಸ್ಕೃತ, ಇಂಗ್ಲಿಷ್ಭಾಷೆಯಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ.
ಸರಳ ಸಜ್ಜನಿಕೆಗೆ ಹೆಸರಾಗಿದ್ದ ಲಕ್ಷ್ಮೀನಾರಾಯಣ ಭಟ್ಟರನ್ನು ಅವರ ಶಿಷ್ಯರು, ಆಪ್ತರು ಪ್ರೀತಿಯಿಂದ ಎನ್ಎಸ್ಎಲ್ ಎಂದು ಕರೆಯುತ್ತಿದ್ದರು. ಜೀವನದಲ್ಲಿ ಸರಳತೆ ಮೈಗೂಡಿಸಿಕೊಂಡು ಮಾದರಿಯಾಗಿ ಬದುಕಿದವರು.
ಇದನ್ನೂ ಓದಿ:ಜನಪ್ರಿಯ ಕವಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ
ಲಕ್ಷ್ಮೀನಾರಾಯಣ ಭಟ್ಟರು 1936 ಅಕ್ಟೋಬರ 29ರಂದು ಶಿವಮೊಗ್ಗದಲ್ಲಿ ಜನಿಸಿದರು. ಇಂಟರ್ಮೀಡಿಯೆಟ್ ಬಳಿಕ ಮೈಸೂರಿನಲ್ಲಿ ಎಂ.ಎ ಆನರ್ಸ್ ಪದವಿ ಪಡೆದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್ಡಿ ಪದವಿಯನ್ನು ಪಡೆದರು. ‘ಆಧುನಿಕ ಕನ್ನಡ ಕಾವ್ಯ’ ಮಹಾ ಪ್ರಬಂಧಕ್ಕೆ ಪಿ.ಎಚ್ಡಿ ದೊರೆಯಿತು. ತೀನಂಶ್ರೀ, ಡಿಎಲ್ ಗುಂಡಪ್ಪ, ಶ್ರೀಕಂಠ ಶಾಸ್ತ್ರಿ ಅವರ ಒಡನಾಟದೊಂದಿಗೆ ಆಳವಾಗಿ ಸಾಹಿತ್ಯ ಅಧ್ಯಯನ ಮಾಡಿದರು. ಇಂಗ್ಲಿಷ್ ಮತ್ತು ಸಂಸ್ಖೃತ ಕಲಿತು ಅನುವಾದ ಕೆಲಸಗಳಲ್ಲೂ ತೊಡಗಿಕೊಂಡರು.
ಶಿಶುಸಾಹಿತ್ಯ, ಭಾವಗೀತೆಗಳ ರಚನೆ ಮತ್ತು ಅನುವಾದ ಕಾರ್ಯ ಅವರಿಗೆ ಬಹು ಪ್ರಿಯವಾದ ಪ್ರಕಾರಗಳಾಗಿದ್ದವು. ಮಕ್ಕಳಿಗಾಗಿ ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ:ಪ್ರೀತಿಯ ಒರತೆ ಭಾವಗೀತೆ: ಲಕ್ಷ್ಮೀನಾರಾಯಣ ಭಟ್ಟ
ಸುನೀತ, ಚಿನ್ನದ ಹಕ್ಕಿ, ಯೇಟ್ಸ್ , ಶೇಕ್ಸ್ ಪಿಯರ್, ಎಲಿಯಟ್, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ ಎಂಬ ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ದೀಪಿಕಾ, ಭಾವಸಂಗಮ, ನೀಲಾಂಜನ, ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಬಂದೆ ಬರತಾವ ಕಾಲ, ಅರುಣ ಗೀತೆ ಜನಪ್ರಿಯ ಕವನ ಸಂಕಲನಗಳಾಗಿವೆ.
ಬಾಲಸಾಹಿತ್ಯ ಪುರಸ್ಕಾರ, ಶಿವರಾಮಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
ಇನ್ನಷ್ಟು ಸುದ್ದಿಗಳು
*ಕೆ.ವಿ.ತಿರುಮಲೇಶ್ ಬರಹ: ಎನ್.ಎಸ್.ಎಲ್. ಮತ್ತು ಶೇಕ್ಸ್ಪಿಯರನ ಸುನೀತಮಾಲೆ
*ಲಕ್ಷ್ಮೀನಾರಾಯಣ ಭಟ್ಟರ 10 ಜನಪ್ರಿಯ ಭಾವಗೀತೆಗಳು...
*ನೋಡಿ: ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಕುರಿತ ಸಾಕ್ಷ್ಯಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.