ADVERTISEMENT

ನಾಯಕನಹಟ್ಟಿ| ಗಣೇಶೋತ್ಸವ, ಈದ್ ಮಿಲಾದ್: ಪೊಲೀಸ್ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:46 IST
Last Updated 4 ಸೆಪ್ಟೆಂಬರ್ 2025, 6:46 IST
ನಾಯಕನಹಟ್ಟಿ ಪಟ್ಟಣದಲ್ಲಿ ಎಸ್‌ಪಿ ರಂಜಿತ್‌ ಕುಮಾರ್ ಬಂಡಾರು ನೇತೃತ್ವದಲ್ಲಿ ಬುಧವಾರ ಪಥ ಸಂಚಲನ ನಡೆಯಿತು
ನಾಯಕನಹಟ್ಟಿ ಪಟ್ಟಣದಲ್ಲಿ ಎಸ್‌ಪಿ ರಂಜಿತ್‌ ಕುಮಾರ್ ಬಂಡಾರು ನೇತೃತ್ವದಲ್ಲಿ ಬುಧವಾರ ಪಥ ಸಂಚಲನ ನಡೆಯಿತು   

ನಾಯಕನಹಟ್ಟಿ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ವೇಳೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬುಧವಾರ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.

ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೋಲಿಸರು ಹಾಗೂ ಗೃಹರಕ್ಷಕದಳದ ಸಿಬ್ಬಂದಿ ಪಟ್ಟಣದ ಜೆಸಿ ರಸ್ತೆ, ವಾಲ್ಮೀಕಿ ವೃತ್ತ, ಸಂತೆ ಮೈದಾನ, ಪಾದಗಟ್ಟೆ, ತೇರುಬೀದಿ, ಹಟ್ಟಿಮಲ್ಲಪ್ಪನಾಯಕ ವೃತ್ತ, ಒಳಮಠ ದೇವಾಲಯ, ನಾಗರಕಟ್ಟೆ, ಅಂಬೇಡ್ಕರ್ ವೃತ್ತದ ಮೂಲಕ ಪೊಲೀಸ್‌ ಠಾಣೆವರೆಗೆ ಪಥಸಂಚಲನ ನಡೆಸಿದರು.

‘ನಾಯಕನಹಟ್ಟಿ ಪಟ್ಟಣದ ವಿಶ್ವ ಹಿಂದೂ ಮಹಾಗಣತಿಯ ವಿಸರ್ಜನಾ ಮೆರವಣಿಗೆ ಗುರುವಾರ ಸಂಜೆ ನಡೆಯಲಿದೆ. ಈ ವೇಳೆ ಅಬ್ಬರದ ಸಂಗೀತ ಬಳಕೆಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿ.ಜೆ.ಗಳನ್ನು ಬಳಸುವಂತಿಲ್ಲ. ಕೋಮುದ್ವೇಷ ಹರಡುವ ಗೀತೆಗಳನ್ನು ಹಾಡುವಂತಿಲ್ಲ. ಸಾಂಪ್ರದಾಯಿಕ ವಾದ್ಯಗಳಿಗೆ ಅಡ್ಡಿಯಿಲ್ಲ’ ಎಂದು ರಂಜಿತ್‌ ಕುಮಾರ್ ಬಂಡಾರು ತಿಳಿಸಿದರು.

ADVERTISEMENT

ಮದ್ಯಸೇವಿಸಿ ಗಲಭೆ ಸೃಷ್ಟಿಸುವವರ ಮೇಲೆ ಇಲಾಖೆ ನಿಗಾ ವಹಿಸಲಿದ್ದು, ಕಿಡಿಗೇಡಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನಿಗದಿತ ಸ್ಥಳದಲ್ಲಿ ಮತ್ತು ಸಮಯದಲ್ಲಿ ಗಣೇಶ ವಿಸರ್ಜನೆ ಮಾಡಬೇಕು. ಸಾರ್ವಜನಿಕರು ಮತ್ತು ಗಣೇಶೋತ್ಸವ ಆಚರಣೆ ಸಮಿತಿ ಸದಸ್ಯರು ಭಾವೈಕ್ಯದಿಂದ ಎರಡೂ ಹಬ್ಬಗಳನ್ನು ಆಚರಿಸುವ ಮೂಲಕ ಇಲಾಖೆಗೆ ಸಹಕಾರ ನೀಡಬೇಕು. 2 ಸಶಸ್ತ್ರ ಮೀಡಲು ಪಡೆ, ಒಂದು ಕೆಎಸ್‌ಆರ್‌ಪಿ ತುಕಡಿ, ಮೂರು ಠಾಣಾ ವ್ಯಾಪ್ತಿಯ ಸಿಬ್ಬಂದಿಯ ಬಂದೋಬಸ್ತ್ ಇರಲಿದೆ ಎಂದರು.

ಎಎಸ್‌ಪಿ ಶಿವಕುಮಾರ್, ಡಿವೈಎಸ್‌ಪಿ ಟಿ.ಬಿ.ರಾಜಣ್ಣ, ಸಿಪಿಐಗಳಾದ ಹನುಮಂತ ಎಂ.ಶಿರೇಹಳ್ಳಿ, ಕಾಳಿಕೃಷ್ಣ, ಮಂಜುನಾಥ, ಪಿಎಸ್‌ಐ ಜಿ.ಪಾಂಡುರಂಗ, ಎಎಸ್‌ಐಗಳಾದ ಆರ್.ಕೆ.ತಿಪ್ಪೇಸ್ವಾಮಿ, ದಾದಾಪೀರ್, ಸಿಬ್ಬಂದಿ ರಾಘವೇಂದ್ರ, ರಾಮಾಂಜಿನೇಯ, ವೀರಭದ್ರಪ್ಪ, ಅಣ್ಣಪ್ಪನಾಯ್ಕ, ರುದ್ರಪ್ಪ, ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.