ADVERTISEMENT

ಅಧಿಕಾರಶಾಹಿಯೂ ಹೊಣೆ

ಸತ್ಯಬೋಧ, ಬೆಂಗಳೂರು
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

‘ಲೋಕಾಯುಕ್ತ ಕೊಲೆ ಪ್ರಯತ್ನಕ್ಕೆ ಭದ್ರತಾ ಲೋಪವೇ ಕಾರಣ’ವೆಂಬ ಅಂಶಕ್ಕೆ ಒತ್ತುಕೊಟ್ಟು ಈಗ ತನಿಖೆ ನಡೆದಿದೆ. ‘ಲೋಹ ಶೋಧಕ ಮತ್ತು ತಪಾಸಣಾ ಸಿಬ್ಬಂದಿ ಇದ್ದಿದ್ದರೆ ಇದನ್ನು ತಡೆಯಬಹುದಿತ್ತು’ ಎಂಬ ಮಾತು ಹೆಚ್ಚು ಕೇಳಿಬರುತ್ತಿದೆ.

ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಾಗಿ ಲೋಕಾಯುಕ್ತ ಕಚೇರಿಗೆ ಬಂದಿದ್ದ ಒಬ್ಬ ಮಹಿಳೆಯ ಅಳಲನ್ನೂ ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಕೊಲೆಗೆ ಹೊರಟವನೂ ಒಂದು ರೀತಿ ಆತ್ಮಾಹುತಿ ದಳದವನೇ. ಕೊಲೆಯ ನಂತರ ತನಗೆ ಶಿಕ್ಷೆ ತಪ್ಪದು ಎಂದು ತಿಳಿದೇ ಅವನು ಇದಕ್ಕೆ ಮುಂದಾಗಿದ್ದನು. ಭದ್ರತಾ ಲೋಪ ಇಲ್ಲದಿದ್ದರೆ ಇದನ್ನು ತಡೆಯಬಹುದಿತ್ತು. ಆದರೆ ಆತ್ಮಹತ್ಯೆ ಮಾಡಿಕೊಳ್ಳ ಹೊರಟವಳನ್ನು ತಡೆಯಲು ಸಾಧ್ಯವಿರಲಿಲ್ಲ.

ADVERTISEMENT

ಇದನ್ನು ಗಮನಿಸಿದಾಗ, ತನಿಖೆಯನ್ನು ಭದ್ರತಾ ಲೋಪಕ್ಕೆ ಮಾತ್ರ ಸೀಮಿತವಾಗಿಸದೆ, ಜನರನ್ನು ಇಂತಹ ಹತಾಶ ಸ್ಥಿತಿಗೆ ತಳ್ಳಿದ ಆಡಳಿತದ ಅವ್ಯವಸ್ಥೆ ಮತ್ತು ನಿಧಾನ ಭ್ರಷ್ಟತೆಗಳ ಬಗ್ಗೆಯೂ ತನಿಖೆ ನಡೆಸುವುದು ಅಗತ್ಯ ಎಂದೆನಿಸುತ್ತದೆ. ಈ ಹತಾಶ ಭಾವನೆಗೆ ಎಡೆ ಮಾಡಿಕೊಟ್ಟ ಸ್ಥಿತಿಯೇ ಇದಕ್ಕೆ ಮೂಲ ಕಾರಣ.

‘ನೌಕರಶಾಹಿಗೆ ಶಿಕ್ಷೆಯ ಭಯವಿಲ್ಲ ಮತ್ತು ರಾಜಕಾರಣಿಗಳ ಬೆಂಬಲ ಇರುತ್ತದೆ. ಇದರಿಂದ ಜನತೆಗೆ ತೊಂದರೆ ಕೊಡುವ ಧೈರ್ಯ ಅವರಲ್ಲಿ ಬರುತ್ತದೆ’ ಎಂದು ಜನರು ತೀರ್ಮಾನಕ್ಕೆ ಬರುವಂತೆ ಆಗಬಾರದು. ಇದಕ್ಕಾಗಿ ಎಲ್ಲ ಪಕ್ಷಗಳೂ ತಮ್ಮ ಶಾಸಕರುಗಳಿಗೆ, ಆಡಳಿತದಲ್ಲಿ ಮೂಗುತೂರಿಸದಂತೆ ಮತ್ತು ತಮ್ಮ ಜವಾಬ್ದಾರಿ ಅರಿತು ವರ್ತಿಸುವಂತೆ ಸೂಚನೆ ನೀಡುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.