ADVERTISEMENT

ಅಧ್ಯಯನ ಆಗಬೇಕು

ಹಂ.ಗು.ರಾಜೇಶ್‌
Published 21 ಅಕ್ಟೋಬರ್ 2015, 19:30 IST
Last Updated 21 ಅಕ್ಟೋಬರ್ 2015, 19:30 IST

‘ಮಾಗಡಿಯ ಕೆಂಪಾಪುರದಲ್ಲಿರುವ ಸಮಾಧಿ ಹಾಗೂ ಗೋಪುರದ ಬಗ್ಗೆ ಬೇರೆ ಬೇರೆ ಸಂಶೋಧಕರು ವಿವಿಧ ರೀತಿಯಲ್ಲಿ ಅರ್ಥ ಬರುವಂತೆ ಹೇಳಿಕೆಗಳನ್ನು ನೀಡಿ ಇತಿಹಾಸವನ್ನು ತಿರುಚಲು ಪ್ರಯತ್ನಿಸಬಾರದು’ ಎಂದು ಸಚಿವ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಎಚ್ಚರಿಸಿದ್ದಾರೆ. ಅಲ್ಲದೆ, ಗೋಪುರ ಹಾಗೂ ಅದರ ಸುತ್ತಮುತ್ತಲಿನ ಜಾಗದಲ್ಲಿ ಉತ್ಖನನ ಮಾಡಿ ವರದಿ ನೀಡುವಂತೆ ಪ್ರಾಚ್ಯವಸ್ತು ಇಲಾಖೆಗೆ ಸೂಚಿಸುವುದಾಗಿ ತಿಳಿಸಿದ್ದಾರೆ. ಕೆಂಪೇಗೌಡರ ಸಮಾಧಿ ಎನ್ನಲಾಗುತ್ತಿರುವ ಈ ಗೋಪುರದ ಬಳಿ ಇರುವ ಶಾಸನದ ಲಿಪಿ ಕುರಿತು ಅವರು ಪುಸ್ತಕದಲ್ಲಿ ಪರಿಶೀಲನೆ ನಡೆಸಿದ್ದು ವರದಿಯಾಗಿದೆ (ಪ್ರ.ವಾ., ಅ. 16).

ಸಚಿವರೇ ಪುಸ್ತಕ ಹಿಡಿದು ಶಾಸನವನ್ನು ಖಾತ್ರಿಪಡಿಸುವುದಾದರೆ, ಗೋಪುರದ ಪಕ್ಕದಲ್ಲಿ ಉತ್ಖನನ ಮಾಡುವಂತೆ ಸೂಚಿಸುವುದಾದರೆ ಇತಿಹಾಸಕಾರರು, ಶಾಸನತಜ್ಞರು, ಪುರಾತತ್ವ ತಜ್ಞರು ಏಕೆ ಬೇಕು? ಸಚಿವರು ಉತ್ಖನನಕ್ಕೆ  ಸೂಚಿಸಿರುವುದನ್ನು ನೋಡಿದರೆ ಗೋಪುರವನ್ನು ಕಲ್ಲುಗಣಿ ಅಂದುಕೊಂಡಂತೆ ಕಾಣುತ್ತದೆ.

ವ್ಯಕ್ತಿಯ ಕಾಯಿಲೆಯನ್ನು ಪತ್ತೆ ಮಾಡಲು ಆಧುನಿಕ ತಂತ್ರಜ್ಞಾನವನ್ನು ಇಟ್ಟುಕೊಂಡೇ ನೂರೆಂಟು ವಿಧದ ಪರೀಕ್ಷೆಗಳನ್ನು ವೈದ್ಯರು ನಡೆಸುತ್ತಾರೆ. ಹಾಗಿರುವಾಗ, 400-500 ವರ್ಷಗಳ ಚರಿತ್ರೆಯನ್ನು ನಿಂತನಿಲುವಿನಲ್ಲೇ ಕೆಲವು ಅಂಶಗಳನ್ನಾಧರಿಸಿ ಪ್ರಕಟಿಸಿಬಿಡುವಷ್ಟು ಜರೂರತ್ತು ಏನಿದೆ? ಸಚಿವರು ಈ ರೀತಿಯ ಆತುರ ತೋರದೆ, ಆಮೂಲಾಗ್ರ ಅಧ್ಯಯನ ನಡೆಸಲು ತಜ್ಞರಿಗೆ ಮುಕ್ತ ಅವಕಾಶ ಮಾಡಿಕೊಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.