ADVERTISEMENT

ಆಸ್ಪತ್ರೆ ವಾಹನಕ್ಕೆರಾಜಭವನದಲ್ಲಿ ಏನು ಕೆಲಸ?

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಕಾಡುಗೊಂಡನಹಳ್ಳಿಯಲ್ಲಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ ಇದೆ. ಇಲ್ಲಿನ ಸಿಬ್ಬಂದಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿರುತ್ತಾರೆ.
ಅನೇಕ ವರ್ಷದಿಂದ ಸದರಿ ಆಸ್ಪತ್ರೆಯ ವತಿಯಿಂದ ತಿಂಗಳಿಗೆ ಎರಡು ಮೂರು ಬಾರಿ ಕುಟುಂಬ ಯೋಜನೆ ಶಿಬಿರವನ್ನು ಯಲಹಂಕದಲ್ಲಿ ಏರ್ಪಡಿಸಲಾಗುತ್ತಿದೆ.
 
ಅಂಥ ಸಂದರ್ಭದಲ್ಲಿ ಇಲ್ಲಿಂದ ಮಹಿಳೆಯರನ್ನು ಶಿಬಿರಕ್ಕೆ ಕರೆದುಕೊಂಡು ಹೋಗಿ ಬರಲು ಆಸ್ಪತ್ರೆಗೆಂದೇ ಒಂದು ಸರ್ಕಾರಿ ವಾಹನ ಇತ್ತು. ಆದರೆ ಇದನ್ನು ರಾಜಭವನದ ಸಿಬ್ಬಂದಿ ಮೂರು ವರ್ಷಗಳ ಹಿಂದೆ ರಾಜಭವನ ಆಸ್ಪತ್ರೆಗೆಂದು ತೆಗೆದುಕೊಂಡು ಹೋಗಿ ಅಲ್ಲಿ ಸುಮ್ಮನೆ ನಿಲ್ಲಿಸಿಕೊಂಡಿದ್ದಾರೆ.

ಇಲ್ಲಿದ್ದರೆ ಊರ ಜನರಿಗೆ ಅದರಿಂದ ಉಪಕಾರವಾದರೂ ಆಗುತ್ತದೆ. ಈಗ ವಾಹನ ಇಲ್ಲದೆ ಬಹಳ ತೊಂದರೆಯಾಗುತ್ತಿದೆ. ರಾಜಭವನದವರಿಗೆ ಬೇಕೆಂದರೆ ಬೇಕಾದಷ್ಟು ಸರ್ಕಾರಿ ವಾಹನಗಳು ಸಿಗುತ್ತವೆ. ಅವರಿಗೇಕೆ ನಮ್ಮಂಥ ಬಡವರ ಸೌಕರ್ಯದ ವಾಹನದ ಮೇಲೆ ಕಣ್ಣು? ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ಸಂಪರ್ಕಿಸಿದರೂ ಏನೂ ಪ್ರಯೋಜನವಾಗಿಲ್ಲ.

ಕುಟುಂಬ ಯೋಜನೆ ಶಿಬಿರಕ್ಕೆ ಹೋಗುವ ಸಲುವಾಗಿ ಮಹಿಳೆಯರು, ಪುರುಷರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 7 ರಿಂದ 8 ಗಂಟೆಯೊಳಗೆ ಹಾಜರಿರುತ್ತಾರೆ. ಆದರೆ ಅವರೆಲ್ಲ ವಿಧಿಯಿಲ್ಲದೆ ಬಿಟಿಎಸ್ ಬಸ್‌ನಲ್ಲಿ ಪ್ರಯಾಣಿಸುವುದನ್ನು ಯಾರು ಬೇಕಾದರೂ ನೋಡಬಹುದು. ಅದರಲ್ಲೂ ಶಸ್ತ್ರಕ್ರಿಯೆಗೆ ಒಳಗಾಗಬೇಕಾದ ಮಹಿಳೆಯರು ಕಷ್ಟಪಟ್ಟುಕೊಂಡು ಬಸ್‌ನಲ್ಲಿ ಹೋಗಿಬರುವುದನ್ನು ಕಣ್ಣಾರೆ ಕಾಣಬಹುದು. 

ಜನ ಸೇವೆಗೆ ಇರುವ ಸರ್ಕಾರಿ ವಾಹನವನ್ನು ರಾಜಭವನದ ಸೇವೆಗೆ ಕಳಿಸಿರುವುದೇ ಇಷ್ಟೆಲ್ಲ ತೊಂದರೆಗೆ ಕಾರಣ. ಈ ವಾಹನ ಮತ್ತೆ ಇಲ್ಲಿಯ ಸೇವೆಗೆ ದೊರೆಯುವಂತೆ ಮಾಡಲು ಕೇಳಿಕೊಳ್ಳುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.