ವಿದೇಶಗಳಲ್ಲಿ ಅಡಗಿರುವ
ಕಪ್ಪು ಹಣ ಬಯಲಿಗೆಳೆಯುವ
ಬಕಾಸುರ ಪ್ರತಿನಿಧಿಗಳೇ,
ಮೊದಲು ಹೊರತನ್ನಿರಿ
ಇಲ್ಲೇ ಇರುವ ದೇಗುಲಗಳಲ್ಲಿನ
‘ಕೃಷ್ಣನ ಲೆಕ್ಕ’ವನ್ನು
ಇಟ್ಟಿಗೆಯ ಹೆಸರಲ್ಲಿ ಎತ್ತಿದ ಹಣ,
ಬಂಗಾರವೋ ಮಣಮಣ,
ಬಾಯಿಮುಚ್ಚಿಕೊಂಡು ಬಿದ್ದಿದೆ
ತಿಮ್ಮಪ್ಪನ ಹುಂಡಿಯಲ್ಲಿ
ಪಾಪದ ಶರಣಾಗತಿ
ಸಾಯಿಬಾಬಾಗೆ
ಸಾಹುಕಾರರ ಭಕುತಿ,
ಇಂಥ ಕಪಟಿಗಳ ಮೇಲೆಲ್ಲಾ
ದೇವರಿಗೆ ಯೇಟೊಂದು ಪಿರುತಿ!..
ಅಣ್ಣಗಳಿರಾ, ಅಕ್ಕಗಳಿರಾ
ನಿಂತ ನೆಲವನ್ನೊಮ್ಮೆ
ಗುಡಿಸಿ ನೋಡಿ
ಸಾಕಾದಿದ್ದರೆ ಹೊರಡೋಣ
ಸ್ವಿಸ್ ಬ್ಯಾಂಕಿನೆಡೆಗೆ
ಸೇರಲಿದೆ ಅಲ್ಲಿಗೆ
ಎಲ್ಲ ಭಾರತೀಯರ ನಡಿಗೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.