ಮಾನವ ಬಂಧುತ್ವ ವೇದಿಕೆಯ ಅಡಿಯಲ್ಲಿ ಇದೇ ತಿಂಗಳು 10 ಮತ್ತು 11ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ದಲಿತೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಲಿತರು ಎಂದರೆ ದಮನಕ್ಕೆ ಒಳಗಾದವರು, ಶೋಷಿತರು, ಆರ್ಥಿಕವಾಗಿ ತೀರ ಕೆಳಮಟ್ಟದವರು ಎಂಬ ಅರ್ಥವಿದೆ. ಮತ್ತು ಈ ಅರ್ಥಕ್ಕೆ ಪೂರಕವಾದ ಪ್ರಾಯೋಗಿಕ ಸಾಮಾಜಿಕ ವಿಷಮ ಸ್ಥಿತಿ ಇನ್ನೂ ಜೀವಂತವಿದೆ.
ಶೋಷಣೆಯಿಂದ ನರಳುತ್ತಿರುವ ಈ ಸಮುದಾಯದ ಸಾಂಸ್ಕೃತಿಕ ವಿವೇಚನೆ- ಅಧ್ಯಯನದ ಬಗ್ಗೆ ಗೊತ್ತು. ಆದರೆ, ಇಂಥವರ ಬದುಕಿನ ಉತ್ಸವ ಎಂದರೇನು? ಇದು ನನ್ನಲ್ಲಿ ಗೊಂದಲ ಮೂಡಿಸಿದೆ.
ತುಳಿತಕ್ಕೊಳಗಾದ ಈ ಸಮುದಾಯವನ್ನು ಸಾಮಾಜಿಕವಾಗಿ ಮೇಲಕ್ಕೆತ್ತಲು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಈ ಮೀಸಲಾತಿ ಇಲ್ಲಿಗೆ ಸಾಕು ಎನ್ನುವ ಧಾಟಿಯಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ, ಸರ್ಕಾರಗಳು ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕುವವರೆಗೂ ಮೀಸಲಾತಿಯನ್ನು ಮುಂದುವರೆಸಲಾಗುವುದು ಎಂದು ಸಮರ್ಥಿಸಿಕೊಳ್ಳುತ್ತಿವೆ.
ಅಂದರೆ, ದಲಿತ ಸಮುದಾಯ ಕಣ್ಣೀರಿನಲ್ಲಿ ಕೈತೊಳೆಯುತ್ತ, ವೇದನೆಯಲ್ಲಿದೆ ಎಂದರ್ಥ. ಹೀಗಿರುವಾಗ, ದಲಿತೋತ್ಸವ ಎಂದರೆ, ದಲಿತರ ಬದುಕಿನ ಈ ಎಲ್ಲ ದುರಂತಗಳ ಸಂಭ್ರಮದ ಉತ್ಸವ ಎಂಬ ಅರ್ಥ ನನ್ನ ಅನುಭವದ ಮಿತಿಗೆ ಎದುರಾಗುತ್ತಿದೆ. ಹೀಗಾಗಿ ದಲಿತೋತ್ಸವ ಎಂದರೆ, ಯಾರ ಉತ್ಸವ? ದಲಿತರ ಯಾವುದರ ಉತ್ಸವ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.