ಉನ್ನತ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ, ಕಾಲೇಜು ಶಿಕ್ಷಣ ಇಲಾಖೆ ಅಧೀನದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾಯಂ ಸಹಾಯಕ ಪ್ರಾಧ್ಯಾಪಕರ ಕೊರತೆ ಹಿನ್ನೆಲೆಯಲ್ಲಿ ‘ಅರೆಕಾಲಿಕ’, ‘ಅತಿಥಿ’ ಇತ್ಯಾದಿ ವಿಶೇಷ ಪದ ಬಳಕೆ ಮಾಡಿ ಉಪನ್ಯಾಸಕರ ಸೇವೆಯನ್ನು ಕನಿಷ್ಠ ವೆಚ್ಚದಲ್ಲಿ ಪಡೆಯಲಾಗುತ್ತಿದೆ.
ಅತಿಥಿ ಉಪನ್ಯಾಸಕರಾದ ನಾವು ಕಳೆದ ೧೦–೧೫ ವರ್ಷಗಳಿಂದ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಸದ್ಯ ಈಗ ಸರ್ಕಾರ ೧೨೯೮ ಕಾಯಂ ಸಹಾಯಕ ಪ್ರಾಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಲು ಹೊರಟಿದೆ. ಕಳೆದ ಹತ್ತಾರು ವರ್ಷಗಳಿಂದ ಬೋಧಕರಾಗಿ ಸೇವೆ ಸಲ್ಲಿಸಿ ಸರ್ಕಾರದ ಆರ್ಥಿಕ ಮಿತವ್ಯಯಕ್ಕೆ ಕಾರಣವಾಗಿರುವ ನಮ್ಮನ್ನೇ ಅರ್ಹತೆ ಹಾಗೂ ಸೇವಾ ಹಿರಿತನಗಳನ್ನು ಆಧರಿಸಿ ಪರಿಗಣಿಸಬೇಕು.
ಒಂದು ಅಂದಾಜಿನ ಪ್ರಕಾರ ಸರ್ಕಾರಕ್ಕೆ ವರ್ಷವೊಂದಕ್ಕೆ ಈ ಸೇವೆಯಿಂದ ₨ ೧೪೦ ಕೋಟಿ ಉಳಿತಾಯ, ೧೦ ವರ್ಷಗಳಲ್ಲಿ
₨ ೧,೪೦೦ ಕೋಟಿಗಳಿಗಿಂತಲೂ ಹೆಚ್ಚು ಮಿಗತೆ ಆಗಿರುತ್ತದೆ. ಇದುವರೆವಿಗೂ ಬೇಕಾದ ಅತಿಥಿ ಉಪನ್ಯಾಸಕರು ಕಾಯಂ ಸಂದರ್ಭದಲ್ಲಿ ಬೇಡವಾದರೆ? ಈಗ ಅವರನ್ನು ಹೊರಹಾಕುವುದು ನ್ಯಾಯವೇ? ಉಂಡ ಮೇಲೆ ಬಾಳೆ ಎಲೆಯ ಸಹವಾಸ ಬೇಡ ಎಂತಲೇ? ಈ ರೀತಿಯ ಸೇವೆಯನ್ನು ಪರಿಗಣಿಸಿ ಕಾಯಂ ಮಾಡಿದ ಹಿಂದಿನ ಅನೇಕ ಉದಾಹರಣೆಗಳು ಇವೆ. ಸರ್ಕಾರ ಈಗಲೂ ಈ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು.
–ಎಂ.ಟಿ. ಮಲ್ಲಿಕಾರ್ಜುನಯ್ಯ, ಶಿರಾ ಪಿ.ಸಿ. ಲೋಕೇಶ್, ಗುಬ್ಬಿ ಡಾ.ಶಿವಣ್ಣ, ತಿಮ್ಮಲಾಪುರ, ಲೋಕೇಶ್ ಕುಣಿಗಲ್, ಡಾ.ಸವಿತಾ, ಕೊರಟಗೆರೆ ಕೃಷ್ಣಮೂರ್ತಿ, ಹುಳಿಯಾರು, ನರಸಿಂಹರಾಜು ಪಾವಗಡ, ಡಾ.ವೆಂಕಟೇಶ್, ತಿಪಟೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.