ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರ ಮನದಾಳದ ಮಾತು. ನಮ್ಮ ರಾಜ್ಯದಲ್ಲಿ 2000 ಮಾಧ್ಯಮಿಕ ಶಾಲೆಗಳು ಮಕ್ಕಳ ಸಂಖ್ಯೆ ಕೊರತೆಯಿಂದ ಮುಚ್ಚಿವೆ. ಆದರೆ ಮುಚ್ಚಲಾದ ಶಾಲೆಗಳಿಗೆ ಆಯಾ ಗ್ರಾಮಗಳಲ್ಲಿ ಬೇಕಾಗುವಷ್ಟು ಮಕ್ಕಳಿದ್ದಾರೆ.
ಆದರೆ ಅವರೆಲ್ಲರೂ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಹೋಗುತ್ತಿದ್ದಾರೆ. ಈ ಮಕ್ಕಳ ಪೋಷಕರು, ಶಿಕ್ಷಕರು, ಕನ್ನಡ ಕನ್ನಡ ಎಂದು ಕೂಗಾಡುವ ಹೋರಾಟಗಾರರು, ವೇದಿಕೆಗಳಲ್ಲಿ ಭಾಷಣ ಬಿಗಿಯುವ ಮತ್ತು ಪತ್ರಿಕೆಗಳಲ್ಲಿ ಬರೆಯುವ ಸಾಹಿತಿಗಳು, ಜಮೀನ್ದಾರರು, ಸರ್ಕಾರಿ ನೌಕರರು, ಶ್ರೀಮಂತರು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೇ ಕಳುಹಿಸುತ್ತಿರುವುದು ಗುಟ್ಟೇನಲ್ಲ.
ಆದರೆ ಇದಾವುದರ ಪರಿವೇ ಇಲ್ಲದ ಬಡವರು ತಮ್ಮ ಸ್ಥಿತಿಗೆ ತಕ್ಕಂತೆ ಮಕ್ಕಳನ್ನು ಕನ್ನಡ ಶಾಲೆಗಳಿಗೇ ಕಳುಹಿಸುತ್ತಿದ್ದಾರೆ. `ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂದು ಸರ್ಕಾರಕ್ಕೂ ಮನವರಿಕೆಯಾಗಿದೆ ಎನ್ನುವುದು ಮುಖ್ಯಮಂತ್ರಿ ಮತ್ತು ಶಿಕ್ಷಣ ಮಂತ್ರಿಗಳ ಅಭಿಪ್ರಾಯ. ಆದರೆ, ಹೊರಗೆ ಕನ್ನಡ ಪ್ರೀತಿ ವ್ಯಕ್ತಪಡಿಸುತ್ತಾ, ವೈಯಕ್ತಿಕ ಬದುಕಿನಲ್ಲಿ ಇಂಗ್ಲಿಷನ್ನೇ ಅಪ್ಪಿಕೊಂಡಿರುವ ಜನರು ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ತಯಾರಿಲ್ಲದಿರುವಾಗ ಅದನ್ನು ಹೇಗೆ ಅನುಷ್ಠಾನಕ್ಕೆ ತರಬೇಕೆಂಬ ಜಿಜ್ಞಾಸೆಗೆ ಉತ್ತರ ಸಿಗುವುದು ಕಷ್ಟ ಎನ್ನುವುದು ಸತ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.