ADVERTISEMENT

ಕಾರ್ಯವೈಖರಿ ಬದಲಿಸಿ

ಎಚ್.ಎಸ್.ಮಂಜುನಾಥ
Published 15 ಜೂನ್ 2018, 19:17 IST
Last Updated 15 ಜೂನ್ 2018, 19:17 IST

ಕೃಷಿ ಸಚಿವರಾಗಿರುವ ಶಿವಶಂಕರ ರೆಡ್ಡಿ ಅವರು ಕೃಷಿ ಇಲಾಖೆಯ ಒಟ್ಟಾರೆ ಕಾರ್ಯವೈಖರಿಯನ್ನೇ ಬದಲಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ.

ಈಗಿರುವ ಸ್ವರೂಪದಲ್ಲಿ ಕೃಷಿ ಇಲಾಖೆಯಿಂದ ಕೃಷಿಕರಿಗೆ ಹೆಚ್ಚಿನ ಉಪಯೋಗವೇನೂ ಆಗಲಾರದು. ಇಲಾಖೆಯ ಕ್ಷೇತ್ರಮಟ್ಟದ ಸಿಬ್ಬಂದಿಯನ್ನು ದಿನವಿಡೀ ಮೀಟಿಂಗ್‌, ವರ್ಕ್‌ಶಾಪ್ ಅಥವಾ ವಿವಿಧ ಮೇಳಗಳಲ್ಲಿ ತೊಡಗಿಸುವುದನ್ನು ನಿಲ್ಲಿಸಬೇಕು.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಯೊಬ್ಬ ಇಡೀ ದಿನ ಬೆಂಗಳೂರಿನ ಕಚೇರಿಯಲ್ಲಿ ನಡೆಯುವ ಸಭೆಯಲ್ಲೋ ಎರಡು ದಿನಗಳ ಕಾಲ ಲಾಲ್‌ಬಾಗಿನ ಸಿರಿಧಾನ್ಯದ ಮೇಳದಲ್ಲೋ ಪಾಲ್ಗೊಂಡರೆ ಅವರು ತಾಲ್ಲೂಕಿನಲ್ಲಿ ಮಾಡಬೇಕಾಗಿದ್ದ ಕೆಲಸಗಳು ನಿಲ್ಲುವುದಿಲ್ಲವೇ?

ADVERTISEMENT

ರೈತರಿಗೆ ನೆರವು, ಮಾರ್ಗದರ್ಶನ ನೀಡುವುದೇ ಕೃಷಿ ವಿದ್ಯಾಲಯಗಳ ಸ್ಥಾಪನೆಯ ಹಿಂದಿನ ಉದ್ದೇಶ. ಆದರೆ ಅಲ್ಲಿನ ಸಿಬ್ಬಂದಿ, ಅಲ್ಲಿಂದ ಹೊರಬಂದ ಪದವೀಧರರು ಬ್ಯಾಂಕ್, ಕೃಷಿ ಇಲಾಖೆ ಅಥವಾ ಇತರೆಡೆ ಉದ್ಯೋಗಕ್ಕೆ ಸೇರಿ ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದಾರೆ. ಕೃಷಿಕರ ಅಭಿವೃದ್ಧಿ ಮಾತ್ರ ಆಗಲಿಲ್ಲ. ಕೃಷಿ ವಿದ್ಯಾಲಯಗಳಿಗೆ ರಾಜ್ಯ ಸರ್ಕಾರವು ಅನುದಾನ ನೀಡುತ್ತದೆ.

ಆದ್ದರಿಂದ ತನ್ನಪ್ರಾಶಸ್ತ್ಯಗಳನ್ನು ಮಾರ್ಪಡಿಸಿಕೊಳ್ಳುವಂತೆ ಅವುಗಳ ಮೇಲೆ ಸರ್ಕಾರ ಒತ್ತಡ ಹೇರಬೇಕು. ವಾರ್ಷಿಕ ಕೃಷಿ ಮೇಳಗಳು, ಅಲ್ಲಿನ ಅಂತರರಾಷ್ಟ್ರೀಯ ವಿಚಾರಗೋಷ್ಠಿಗಳಿಂದ ರೈತರಿಗೆ ಆಗುವ ಪ್ರಯೋಜನ ಅಷ್ಟಕ್ಕಷ್ಟೇ!

ರಾಜ್ಯ ಕೃಷಿ (ಬೆಲೆ) ಆಯೋಗಕ್ಕೆ ಅಕಡೆಮಿಕ್ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಿಸುವುದರಿಂದ ಪ್ರವಾಸ, ಸೆಮಿನಾರ್, ಮೀಟಿಂಗ್‌ಗಳಲ್ಲೇ ಸಮಯ ವ್ಯಯವಾಗುತ್ತದೆ. ಮಹಾಪ್ರಬಂಧಗಳಂಥ ವರದಿಗಳೂ ತಯಾರಾಗುತ್ತವೆ. ಸಮಯಬದ್ಧ ಕಾರ್ಯಗಳನ್ನು (Timely tasks) ಒಪ್ಪಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅದನ್ನು ಪುನರ್‌ರಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.