ADVERTISEMENT

ಕೆ.ಪಿ.ಎಸ್.ಸಿ ಅವ್ಯವಸ್ಥೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ಎಲ್ಲಾ ನೇಮಕಾತಿಗಳಲ್ಲಿ  ಕೆ.ಪಿ.ಎಸ್.ಸಿ ಒಂದಲ್ಲ ಒಂದು ರೀತಿ ಅಭ್ಯರ್ಥಿಗಳಿಗೆ ತೊಂದರೆ ಕೊಡುತ್ತಾ ಬಂದಿದೆ. ಈಗ 2011ರ ಕೆ.ಎ.ಎಸ್ ಮುಖ್ಯ ಪರೀಕ್ಷೆಯನ್ನು ಡಿ. 15ರಿಂದ ನಡೆಸಲು ಆಯೋಗ ತೀರ್ಮಾನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆಯೋಗ 2011ರ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯನ್ನು ಏ. 2012 ರಲ್ಲಿ ನಡೆಸಿತ್ತು. ಅದರ ಮುಖ್ಯ ಪರೀಕ್ಷೆಯನ್ನು ಆ. 2012 ರಲ್ಲಿ ನಡೆಸಲು ತೀರ್ಮಾನಿಸಿತು. ಕಾರಣ ಆಯೋಗದ ಸದಸ್ಯರೊಬ್ಬರು ನವೆಂಬರ್‌ನಲ್ಲಿ  ನಿವೃತ್ತಿ ಹೊಂದುವವರಿದ್ದುದರಿಂದ ಅಕ್ಟೋಬರ್ ಅಂತ್ಯಕ್ಕೆ ಎಲ್ಲಾ  ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಯೋಗದ ಅಧ್ಯಕ್ಷರು ತೀರ್ಮಾನಿಸಿದ್ದರು. ಆದರೆ ಮುಖ್ಯ ಪರೀಕ್ಷೆಗೆ ಉಚ್ಚನ್ಯಾಯಲಯವು ತಡೆಯಾಜ್ಞೆ ನೀಡಿದ್ದರಿಂದ ಆಯೋಗದ ಪ್ರಯತ್ನ ವಿಫಲವಾಯಿತು.

ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಕೆ.ಪಿ.ಎಸ್.ಸಿ ಹಲವು ಬಾರಿ ಪ್ರಯತ್ನಿಸಿತು. ಈಗ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದ್ದು, ತೆರವುಗೊಳಿಸಿದ ಮಾರನೆ ದಿನವೆ ಅಂತರ್ಜಾಲದಲ್ಲಿ ಡಿಸೆಂಬರ್ 15ರಿಂದ ಮುಖ್ಯ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಹಲವಾರು ಪರೀಕ್ಷೆಗಳನ್ನು ಎದುರಿಸುತ್ತಿದ್ದು, ಇದರ ಬಗ್ಗೆ ಈಗಾಗಲೇ ಕೆ.ಪಿ.ಎಸ್.ಸಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾರಣ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರೊಬ್ಬರು 2013ರ ಏಪ್ರಿಲ್ ಕೊನೆಗೆ ನಿವೃತ್ತಿಯಾಗುವುದರಿಂದ ಕೆ.ಎ.ಎಸ್ ಪರೀಕ್ಷೆ ಮತ್ತು ಉಳಿದ ಎಲ್ಲಾ ನೇಮಕಾತಿಗಳನ್ನು ತರಾತುರಿಯಲ್ಲಿ ಮಾಡಿ ತಮಗೆ ಬೇಕಾದವರಿಗೆ ಅನುಕೂಲ ಮಾಡಲು ಈ ರೀತಿಯ ಉದ್ಧಟತನವನ್ನು ಅಧ್ಯಕ್ಷರು ಪ್ರದರ್ಶಿಸುತ್ತ್ದ್ದಿದಾರೆ. ಈಗಾಗಲೇ ಈ ಹಿಂದಿನ ಅಧ್ಯಕ್ಷರು ಇದೇ ರೀತಿಯ ಅಕ್ರಮ ನೇಮಕಾತಿಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ನಿವೃತ್ತಿಗೋಸ್ಕರ ಕೆ.ಎ.ಎಸ್ ಅಭ್ಯರ್ಥಿಗಳನ್ನು ಬಲಿ ಕೊಡುವುದು ಎಷ್ಟು ಸಮಂಜಸ? ಇನ್ನಾದರೂ ಆಯೋಗವು ಕೆ.ಎ.ಎಸ್ ಮುಖ್ಯ ಪರೀಕ್ಷೆಯನ್ನು ಮುಂದೂಡಿ ಅಭ್ಯರ್ಥಿಗಳ ಹಿತ ಕಾಯುವುದೆಂದು ಅಭ್ಯರ್ಥಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.