ADVERTISEMENT

ಟಿಪ್ಪು ನ್ಯಾಯನಿಷ್ಠುರತೆ

ಅಮೃತ ಸೋಮೇಶ್ವರ
Published 20 ನವೆಂಬರ್ 2015, 19:48 IST
Last Updated 20 ನವೆಂಬರ್ 2015, 19:48 IST

ಅನೇಕ ಪ್ರಮುಖ ಐತಿಹಾಸಿಕ ವ್ಯಕ್ತಿಗಳ ಬಗೆಗೆ ಸಮಂಜಸವಾದ ಹಾಗೂ ವಿಶ್ವಾಸಾರ್ಹವಾದ ಸಮಗ್ರ ಮಾಹಿತಿ ದೊರೆಯುವುದಿಲ್ಲ. ಅದರಲ್ಲೂ ಟಿಪ್ಪು ಸುಲ್ತಾನನಂಥ ಚಾರಿತ್ರಿಕ ಮಹತ್ವದ ವ್ಯಕ್ತಿಗಳ ಕುರಿತು ಬಹಳ ಕಾಲದಿಂದ ಎಂದರೆ ಟಿಪ್ಪುವಿನ ಕಡುವಿರೋಧಿಗಳಾದ ಬ್ರಿಟಿಷರ ಕಾಲದಿಂದಲೂ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತ ಬಂದಿವೆ. ಆತನ ಕುರಿತಾದ ಕೆಲವು ಬರವಣಿಗೆಗಳು, ಸೃಜನಶೀಲ ನಾಟಕಗಳು, ಕಾದಂಬರಿಗಳು ಕೆಲವು ವಿವಾದಗಳನ್ನು ಹುಟ್ಟು ಹಾಕಿವೆ. ಜನಸ್ತುತಿಯಲ್ಲಿ ಸಾಕಷ್ಟು ವಿವಾದಾಸ್ಪದ ಅಭಿಪ್ರಾಯಗಳು ಬೆಳೆದು ಬಂದಿವೆ.

ಕೆಲವು ವರ್ಷಗಳ ಹಿಂದೆ ಕರಾವಳಿ ಕರ್ನಾಟಕದ ಪ್ರದೇಶದಲ್ಲಿ ನಾನು ಕೇಳಿದ್ದ ಒಂದು ವೃತ್ತಾಂತ, ಟಿಪ್ಪು ಸುಲ್ತಾನನ ನ್ಯಾಯನಿಷ್ಠುರತೆಯನ್ನು ಎತ್ತಿ ಹೇಳುತ್ತದೆ. ಆ ಕಾಲದಲ್ಲಿ ಈ ಪ್ರದೇಶಕ್ಕೆ ಟಿಪ್ಪುವೇ ನೇಮಿಸಿದ್ದ ಮುಸ್ಲಿಂ ಅಧಿಕಾರಿಯೊಬ್ಬನಿದ್ದ. ಆತನು ಮೊದಲು ಸಂಭಾವಿತನಂತಿದ್ದು ಮತ್ತೆ ದರ್ಪಿಷ್ಟನೂ, ಕ್ರೂರನೂ, ಲಂಪಟನೂ ಆಗಿ ಈ ಭಾಗದಲ್ಲಿ ಪ್ರಜಾಕಂಟಕನೇ ಆಗಿದ್ದ. ಕೆಲ ಕಾಲ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಾಗಿದ್ದ ಜನರು, ಯಾರ ಮೂಲಕವೋ ಆತನ ಅನ್ಯಾಯಗಳ ಕುರಿತಾಗಿ ಸುಲ್ತಾನನಿಗೆ ದೂರಿತ್ತರು.

ಒಡನೆಯೇ ಆತನು ನಿಜಸಂಗತಿಯನ್ನು ಪರಿಶೀಲಿಸಲು ಇಲ್ಲಿಗೆ ಧಾವಿಸಿ ಬಂದು ಜನರ ಸಮ್ಮುಖದಲ್ಲೇ ಆ ಅಧಿಕಾರಿಯ ವಿಚಾರಣೆ ಕೈಕೊಂಡ. ಆತನದು ಪರಮ ಅನ್ಯಾಯವೆಂದು ತಿಳಿದ ಟಿಪ್ಪು ಸುಲ್ತಾನ, ಜನರ ಮೂಲಕವೇ ಆ ಅಧಿಕಾರಿಯನ್ನು ಅನಾಮತ್ತಾಗಿ ಎತ್ತಿ ದೊಡ್ಡದೊಂದು ಗೋಣಿಚೀಲದಲ್ಲಿ ತುಂಬಿಸಿ ಬಾಯಿಕಟ್ಟಿ ಆತನು ಬೊಬ್ಬೆ ಹೊಡೆಯುತ್ತಿದ್ದಂತೆಯೇ ಮೊರೆಯುವ ಸಮುದ್ರಕ್ಕೆ ಬಿಸಾಡಿಸಿದ. ಜನರು ಸುಲ್ತಾನನ ನ್ಯಾಯಪರತೆಯನ್ನು ಬಾಯ್ತುಂಬಾ ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.