ADVERTISEMENT

ದಂತ ಭಗ್ನವಾದೀತೇ?

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ಸಿನಿಮಾ ರಂಗದ ನಾಯಕರಿಂದಲೇ ವಿಜೃಂಭಿಸಿರುವ ತಮಿಳುನಾಡು ರಾಜಕೀಯದಲ್ಲೀಗ ‘ಕ್ಲಾಸ್‌ ನಟ’ ಕಮಲ್‌ ಹಾಸನ್‌ ಹಾಗೂ ‘ಮಾಸ್‌ ನಟ’ ರಜನಿಕಾಂತ್‌ ಅವರ ಆರಂಗೇಟ್ರಂ ಆಗಿರುವುದು ಸ್ವಾಗತಾರ್ಹ.

ಸ್ವಲ್ಪವೂ ಆರ್ಥಿಕ ಬಂಡವಾಳ ಇಲ್ಲದೆ, ಭ್ರಷ್ಟತೆಯ ವಿರುದ್ಧದ ಹೋರಾಟದಿಂದಲೇ ಜನಪ್ರಿಯರಾಗಿದ್ದ ಅರವಿಂದ ಕೇಜ್ರಿವಾಲ್‌ ಅವರು ದೆಹಲಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಹೇಳಹೆಸರಿಲ್ಲದಂತೆ ಮಾಡಿ, ಮುಖ್ಯಮಂತ್ರಿಯಾದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಎಎಪಿ ಆಂದೋಲನ ದೇಶವ್ಯಾಪಿಯಾಗಿ ಹೊಸ ರಾಜಕೀಯ ಶಕೆ ಆರಂಭವಾಗುವುದೇನೋ ಎಂಬ ಭಾವನೆ ಮೂಡಿಸಿತ್ತು.

ಆದರೆ ಇಂದಿನ ಅವರ ಸ್ಥಿತಿ ನೋಡಿದರೆ ಕೇಜ್ರಿವಾಲ್‌ ಐದು ವರ್ಷದ ತಮ್ಮ ಅವಧಿಯನ್ನು ಪೂರೈಸಿದರೆ ಅದೊಂದು ಪವಾಡ ಎಂಬಂತಿದೆ. ಈಗಂತೂ ಇಡೀ ಆಡಳಿತ ವ್ಯವಸ್ಥೆಯನ್ನೇ ಅವರು ಎದುರು ಹಾಕಿಕೊಂಡಿದ್ದಾರೆ. ‘ಹೇಳುವುದು ಆಚಾರ ಮಾಡುವುದು ಅನಾಚರ’ ಎಂಬತಾಗಿದೆ ಕೇಜ್ರೀವಾಲ್ ನಡೆ.

ADVERTISEMENT

ಯಾವ ಪಕ್ಷದೊಡನೆಯೂ ಗುರುತಿಸಿಕೊಳ್ಳದೆ, ಜನರ ಅಭಿವೃದ್ಧಿಗಾಗಿಯೇ ಪಕ್ಷ ಸ್ಥಾಪಿಸಲು ಹೊರಟಿರುವ ಕಮಲ್‌ ಹಾಸನ್, ತಮ್ಮ ಪಕ್ಷದ ಉದ್ಘಾಟನೆಗೆ ಕಾಗದದ ಹುಲಿಯಾಗಿರುವ ಕೇಜ್ರಿವಾಲ್‌ ಅವರನ್ನು ಆಹ್ವಾನಿಸಿ ‘ಪ್ರಥಮ ಚುಂಬನದಲ್ಲೇ ದಂತಭಗ್ನ’ದ ಸ್ಥಿತಿ ತಂದುಕೊಂಡಂತೆ ಕಾಣುತ್ತದೆ. ಹೊಸ ಪಕ್ಷ ಸ್ಥಾಪಿಸಲು ಹೊರಟಿರುವ ರಜನಿಕಾಂತ್ ಅವರಿಗೆ ವರ ಆದೀತೇ?

ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.