ADVERTISEMENT

ದೇಶಭಕ್ತರಿಗೆ ಸ್ವಾಭಿಮಾನ ಇದೆಯೇ?

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 16:05 IST
Last Updated 19 ಜನವರಿ 2011, 16:05 IST

1962 ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಚೀನಾ ಇಂದಿನವರೆಗೂ ನಮ್ಮ ಬೆನ್ನಿಗೆ ಚೂರಿ ಹಾಕುತ್ತಲೇ ಇದೆ. ಈಶಾನ್ಯದಲ್ಲಿ ಅಕ್ಸಾಯ್‌ಚಿನ್‌ನ ಭಾರೀ ಭೂಭಾಗವನ್ನು ಕಬಳಿಸಿದೆ. ಅರುಣಾಚಲ ಪ್ರದೇಶ ತನ್ನದೆಂದು ಸುಳ್ಳು ಹೇಳುತ್ತಾ ಮತ್ತು ಕಾಶ್ಮೀರ ಪಾಕಿಸ್ತಾನದೆಂದೂ ಕುಮ್ಮಕ್ಕು ನೀಡುತ್ತಿದೆ.

ಆಕ್ರಮಿತ ಕಾಶ್ಮೀರದಲ್ಲಿ ರಸ್ತೆಗಳನ್ನು ನಿರ್ಮಿಸಿ ಚೀನಾ ಅಲ್ಲಿ ತನ್ನ ಸೈನಿಕರನ್ನು ಜಮಾಯಿಸಿದೆ. ಚೀನಾಕ್ಕೆ ಭೇಟಿ ನೀಡುವ ಅರುಣಾಚಲ ಮತ್ತು ಕಾಶ್ಮೀರ ವಾಸಿಗಳಿಗೆ ‘ಸ್ಪೆಷಲ್ ವೀಸಾ’ ನೀಡುತ್ತಿದೆ. ಭಾರತಕ್ಕೆ  ‘ಭದ್ರತಾ ಸಮಿತಿ’ ಸದಸ್ಯತ್ವ ಸಿಗುವುದಕ್ಕೆ ಅಡ್ಡಗಾಲೂ ಹಾಕುತ್ತಿದೆ. ಅರುಣಾಚಲದಲ್ಲಿ ನಮ್ಮ ಕಾರ್ಮಿಕರಿಗೆ ಪ್ರತಿರೋಧ ವ್ಯಕ್ತಪಡಿಸುತ್ತಿದೆ. ಸಾಲದೆಂಬಂತೆ ಚೀನಾದಲ್ಲಿ ಬಂಧನದಲ್ಲಿರುವ ಒಬ್ಬ ಸ್ವಾತಂತ್ರ್ಯ ವೀರನಿಗೆ  ‘ನೊಬೆಲ್ ಪ್ರಶಸ್ತಿ’ ನೀಡಿದ ಸಭೆಗೆ ಭಾರತ ಹೋಗಕೂಡದೆಂದು ಆಗ್ರಹಪಡಿಸಿತ್ತು.

ಇಂಥಾ ದ್ರೋಹ ಎಸಗುತ್ತಲೇ ಇರುವ ದೇಶ ನಮಗೆ ಶತ್ರುವಲ್ಲವೇ? ಈ ಶತ್ರುವನ್ನು  ‘ಬಹಿಷ್ಕರಿಸಿ’ಯಾದರೂ ನಮ್ಮ ‘ವಿರೋಧ’ ಪ್ರಕಟಿಸಬೇಕಲ್ಲವೇ? ಬದಲಾಗಿ ‘ದೇಶಭಕ್ತ’ರೆಂದು ಎದೆ ತಟ್ಟಿಕೊಳ್ಳುವ ಬಿಜೆಪಿಯ ಅಧ್ಯಕ್ಷ ನಿತಿನ್ ಗಡ್ಕರಿ ಇದೀಗ ಚೀನಾ ಪ್ರವಾಸ ಕೈಗೊಂಡಿರುವುದು ಸರಿಯೆ?

 ಶತ್ರು ದೇಶವನ್ನು ಬಹಿಷ್ಕರಿಸುವ ಬದಲು ತಬ್ಬಿಕೊಂಡು ಭಾರತದ ಸಂಸತ್ತನ್ನು ಬಹಿಷ್ಕರಿಸುತ್ತಿದ್ದಾರೆ. ಇವರು ದೇಶಭಕ್ತರೋ ಅಥವಾ ಚೀನಾ ಭಕ್ತರೋ? ಕಮ್ಯುನಿಸ್ಟರನ್ನು ಚೀನಾ  ‘ನಿಷ್ಠ’ರು ಎಂದು ಟೀಕಿಸುವ ಬಿಜೆಪಿ ನಾಯಕರೂ ಚೀನಾ  ‘ನಿಷ್ಠ’ರಾದರಲ್ಲವೇ? 62 ರಲ್ಲಿ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದಾಗ, ಚೀನಾದ  ‘ಹೀರೋ’ ಪೆನ್‌ಗೆ ಜನ ಬಹಿಷ್ಕಾರ ಹಾಕಿದ್ದರಲ್ಲವೇ? ಪಾಕಿಸ್ತಾನವನ್ನು  ‘ಶತ್ರು’ ಎನ್ನುವ ನಾವು ಚೀನಾವನ್ನೂ  ‘ಶತ್ರು’ ಎಂದು ಪರಿಗಣಿಸಬೇಕಲ್ಲವೇ? ನಮ್ಮವರೇ ಆದ  ‘ಅಲ್ಪ ಸಂಖ್ಯಾತ’ರನ್ನು  ‘ಬಹಿಷ್ಕರಿಸಬೇಕು’ ಎನ್ನುವ ದೇಶಭಕ್ತರು ಚೀನಾಕ್ಕೆ ಬಹಿಷ್ಕಾರ ಹಾಕುವುದಿಲ್ಲವೇಕೆ? ಇವರಿಗೆ ಸ್ವಾಭಿಮಾನ ಇದೆಯೇ?

   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.