ರಾಜ್ಯದಲ್ಲಿ ಆಡಳಿತ ಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಸರ್ಕಾರ ಹಿಂದಿನ ಸರ್ಕಾರಕ್ಕಿಂತ ಉತ್ತಮ ಎಂದು ತೋರಿಸಿಕೊಳ್ಳಲು ಊರಿಗೊಂದು, ಕೇರಿಗೊಂದು ಡಿ.ಇಡಿ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುತ್ತವೆ. ಇದರಿಂದ ನಾಯಿಕೊಡೆಗಳಂತೆ ಡಿ.ಇಡಿ ಕಾಲೇಜುಗಳು ಬೆಳೆದಿವೆ.
ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚಿನ ಡಿ.ಇಡಿ ಕಾಲೇಜುಗಳಿವೆ. ಪ್ರತಿ ಕಾಲೇಜಿಗೆ 50 ವಿದ್ಯಾರ್ಥಿಗಳಾದರೂ ಪ್ರತಿ ವರ್ಷ ಐವತ್ತು ಸಾವಿರ ವಿದ್ಯಾರ್ಥಿಗಳು ಡಿ.ಇಡಿ ಪದವಿ ಪಡೆಯುತ್ತಾರೆ. 4 ವರ್ಷಗಳಿಂದ ನೇಮಕಾತಿಯೂ ಆಗುತ್ತಿಲ್ಲ. ಇದರಿಂದ ನಿರುದ್ಯೋಗಿಗಳ ಸಂಖ್ಯೆ ಬೆಳೆಯುತ್ತಲೇ ಇದೆ.
ಅದರಲ್ಲೂ ಡಿ.ಇಡಿಗೆ ಬರುವ ವಿದ್ಯಾರ್ಥಿಗಳಲ್ಲಿ ಶೇ 90 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಬಡಕುಟುಂಬದವರೇ ಆಗಿರುತ್ತಾರೆ. ಬೇಗ ನೌಕರಿಗೆ ಸೇರಿ ತಮಗೆ ಅಂಟಿಕೊಂಡಿರುವ ಬಡತನವನ್ನು ತೊಲಗಿಸಬೇಕೆಂದಿರುವ ಅದೆಷ್ಟೋ ಯುವಕರು ಇಂದು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಈ ವೃತ್ತಿಯನ್ನು ಆಯ್ದುಕೊಂಡ ವಿದ್ಯಾರ್ಥಿಗಳ ಮುಂದಿನ ಜೀವನವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಚಿವರು ಮುಂದಿನ ತೀರ್ಮಾನ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.