ADVERTISEMENT

ಪ್ರಾರ್ಥನೆಗೆ ವೆಚ್ಚ ಏಕೆ?

ಸಿ.ಎನ್.ಕೃಷ್ಣಮಾಚಾರ್
Published 25 ಜುಲೈ 2012, 19:30 IST
Last Updated 25 ಜುಲೈ 2012, 19:30 IST

ರಾಜ್ಯದಲ್ಲಿ, ಮಳೆಗರೆಯುವಂತೆ ವರುಣದೇವನನ್ನು ಪ್ರಾರ್ಥಿಸಲು ಹೋಮ ಹವನ ನಡೆಸಬೇಕೆಂದು ಮುಜರಾಯಿ ಇಲಾಖೆ ಅರ್ಚಕರಿಗೆ ಆದೇಶ ನೀಡಿದೆ (ಪ್ರ.ವಾ. 21.7.12). ಅದಷ್ಟೇ ಆಗಿದ್ದರೆ ಇಲಾಖೆಯ ಸಾಚಾತನವನ್ನು ಪ್ರಶ್ನಿಸುವ ಅಗತ್ಯವಿಲ್ಲ.
ಆದರೆ ಐದು ಸಾವಿರ ರೂಪಾಯಿಗೆ ಮೀರದಂತೆ ಹೋಮಕ್ಕೆ ವೆಚ್ಚಗೊಳಿಸುವಂತೆ ಸುತ್ತೋಲೆ ಹೊರಡಿಸಿದಾಗಲೆ ಅನಿಸುತ್ತೆ `ದಾಲ್ ಮೇ ಕುಛ್ ಕಾಲಾ ಹೈ~. 

 ಈ ಹಣದಲ್ಲಿ ವರುಣದೇವನ ಪಾಲೆಷ್ಟು, ಇಲಾಖಾಧಿಕಾರಿಗಳ ಪಾಲೆಷ್ಟು, ಮಿಕ್ಕಿದ್ದು ಯಾರ ಪಾಲಿಗೆ ಎಂಬುದನ್ನು ಸರ್ಕಾರ ನಿಗದಿಪಡಿಸಬೇಕು; ಸದುದ್ದೇಶದಿಂದ ಹೋಮ ನಡೆಯುತ್ತಿದೆ.
 
ಸಂತ್ರಸ್ತ ಗೋಪಾಲಕರು ಯತ್‌ಕಿಂಚಿತ್ ದೇಣಿಗೆ ನೀಡಿ, ಅದರ ದುಪ್ಪಟ್ಟು ಫಲವನ್ನು ಪಡೆಯಬಹುದೆಂದು ಸಾರುವ ಫ್ಲೆಕ್ಸ್ ಫಲಕವನ್ನು, ಊರ ಹೆಬ್ಬಾಲಿಗೆ ನೇತುಹಾಕಿದರಾಯ್ತು. ವಂತಿಗೆ ಮಹಾಪೂರವೇ ಗುಡಿಯೊಳಗೆ ಹರಿದುಬರುತ್ತದೆ.

ಗ್ರಹಣಕಾಲದಲ್ಲಿ ನಕ್ಷತ್ರ ಶಾಂತಿಗಾಗಿ ದೇವಾಲಯಗಳು, ಋತ್ವಿಕರು, ಪುರೋಹಿತರು ಜಾಹೀರಾತು ಕೊಟ್ಟು ಕಿಸೆ ತುಂಬಿಕೊಳ್ಳುವುದಿಲ್ಲವೆ? ಅದೇ ತಂತ್ರ ಇಲ್ಲೂ ವರ್ಕ್‌ಔಟ್ ಆಗುತ್ತೆ. ಸರ್ಕಾರ ಏಕೆ ವೆಚ್ಚಗೊಳಿಸುತ್ತದೆ? ಯಾರನ್ನೋ ರಾತ್ರೋರಾತ್ರಿ ಸಿರಿವಂತರನ್ನಾಗಿಸಲು ತಾನೆ? ನಾಳೆ ಇಲ್ಲೂ ಲೋಕಾಯುಕ್ತದ ಹದ್ದಿನ ಕಣ್ಣು ಬಿದ್ದರೇನು ಗತಿ!

ನಮ್ಮ ಕಾಲದಲ್ಲಿ ಅರಳೀಕಟ್ಟೆಯಲ್ಲಿ ಗದುಗಿನ `ವಿರಾಟಪರ್ವ~ ಗಮಕವಾಚನ ಮಾಡುತ್ತಿದ್ದಂತೆ ಊರಲ್ಲಿ ಕುಂಭದ್ರೋಣ ಧಾರೆ. ಏನು ದುರ್ಗತಿ ಬಂತಪ್ಪ ವರುಣದೇವನಿಗೆ! ಮುಜರಾಯಿ ಇಲಾಖೆಯ ಮರ್ಜಿಗೆ ಸಿಕ್ಕನಲ್ಲ!

ಕೋಟ್ಯಂತರ ರೂಪಾಯಿ ಅಪವ್ಯಯ ತಪ್ಪಿಸಲು ಇರುವ ಒಂದೇ ಮಾರ್ಗ, ಅಷ್ಟೂ ರೊಕ್ಕವನ್ನು ಪಶುಗಳ ಮೇವು ಖರೀದಿಯಲ್ಲಿ ತೊಡಗಿಸುವುದು. ಇನ್ನೆಷ್ಟು ದಿನ ಈ ಸರ್ಕಾರ `ಗೋಲ್‌ಮಾಲ್~ ಕ್ರೀಡೆಯಲ್ಲಿ ತೊಡಗುತ್ತೋ ಕಮಲನಾಭನೆ ಬಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.