ADVERTISEMENT

ಬೆಳಗಾವಿ ವಿಭಜನೆ ಬೇಡ

ಆರ್‌.ಎಸ್‌.ಚಾಪಗಾವಿ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST

ಕರ್ನಾಟಕದಲ್ಲಿ ಅತಿ ದೊಡ್ಡದಾದ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಲು ತೀವ್ರ ಒತ್ತಡ ಪ್ರಾರಂಭವಾಗಿದೆ. ಈ ವಿಚಾರವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ವಿಭಜನೆಗೆ ಕೈಹಾಕುವುದಕ್ಕಿಂತ ಮೊದಲು ವಿಭಜನೆಯಿಂದ ಆಗುವ ಇತರ ಸಮಸ್ಯೆಗಳತ್ತ ಗಮನಹರಿಸಬೇಕು. ಭಾಷಾ ದೃಷ್ಟಿಯಿಂದ ಬೆಳಗಾವಿಯು ಅತಿ ಸೂಕ್ಷ್ಮ ಪ್ರದೇಶವಾಗಿದೆ. ಬೆಳಗಾವಿ ಗಡಿ ಸಮಸ್ಯೆಯು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಶತಾಯ ಗತಾಯ ಹೇಗಾದರೂ ಮಾಡಿ ಬೆಳಗಾವಿಯನ್ನು ಕಬಳಿಸಲು ಮಹಾರಾಷ್ಟ್ರ ಕಾಯುತ್ತಿದೆ.

ಹೀಗಿರುವಾಗ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳು ಮಾತ್ರ ಉಳಿಯುತ್ತವೆ. ಇವುಗಳ ಪೈಕಿ ಎರಡು  ತಾಲ್ಲೂಕು ಪಂಚಾಯಿತಿಗಳು ಮರಾಠಿ ಏಕೀಕರಣ ಸಮಿತಿಯ ಹಿಡಿತದಲ್ಲಿವೆ. ಹಾಗಾಗಿ ಜಿಲ್ಲಾ ಪಂಚಾಯಿತಿ ಕೂಡ ಅವರ ಕೈವಶವಾಗಿ ಇದು ಮರಾಠಿಗರ ಪ್ರಾಬಲ್ಯದ ಜಿಲ್ಲೆಯಾಗಿ ಮಾರ್ಪಡುತ್ತದೆ. ಇದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರಾಠಿಗರ ವಾದಕ್ಕೆ ಮತ್ತಷ್ಟು ಬಲ ಬರುತ್ತದೆ. ಆಗ ಇಡೀ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹೋರಾಟವೂ ಪ್ರಾರಂಭವಾಗಬಹುದು.

ಈ ಅಪಾಯವನ್ನು ಮನಗಂಡಿದ್ದ ಜೆ.ಎಚ್. ಪಟೇಲರು ಬೆಳಗಾವಿ ಜಿಲ್ಲೆ ವಿಭಜನೆಯನ್ನು ಕೈಬಿಟ್ಟಿದ್ದರು. ಆದ್ದರಿಂದ ಗಡಿ ಸಮಸ್ಯೆಯು ಒಂದು ತಾರ್ಕಿಕ ಅಂತ್ಯ ಕಾಣುವವರೆಗೆ ಬೆಳಗಾವಿ ಜಿಲ್ಲಾ ವಿಭಜನೆಗೆ ಕೈಹಾಕಬಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.