ADVERTISEMENT

ಭೈರಪ್ಪ ಸ್ಪಷ್ಟನೆ ನೀಡಲಿ

ಡಾ.ಮುಮ್ತಾಜ್‌ ಅಲಿ ಖಾನ್ ಬೆಂಗಳೂರು
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಕಾದಂಬರಿಕಾರ ಎಸ್.ಎಲ್.  ಭೈರಪ್ಪ ಅವರು ಇತ್ತೀಚೆಗೆ  ಇಸ್ಲಾಂ ವಿರುದ್ಧ ಮಾತ­ನಾಡಿದ್ದಾರೆ. ಇದರಿಂದ ಬಹಳ ಆಶ್ಚರ್ಯ­ವಾಯಿತು. ‘ಮುಸ್ಲಿಂ ಧರ್ಮವನ್ನು ಒಪ್ಪದೇ ಇರುವ­ವರನ್ನು ಕೊಲ್ಲಬೇಕು ಎಂದು ಕುರಾನ್ ಧರ್ಮಗ್ರಂಥದಲ್ಲಿ ೨೩ ಕಡೆ  ಉಲ್ಲೇಖಿಸ­ಲಾಗಿದೆ.

ಹೀಗಿರುವಾಗ ಈ ಧರ್ಮವನ್ನು ಹಿಂದೂ ಧರ್ಮಕ್ಕೆ ಹೋಲಿಸುವುದು ನ್ಯಾಯವೇ’ ಎಂದು ಕೇಳಿದ್ದಾರೆ. ಇದು ತುಂಬ ಕಠೋರ ಅಭಿಪ್ರಾಯ. ಕೂಡಲೇ ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಬೇಕು.

ಆರ್‌ಎಸ್‌ಎಸ್‌ನ ಎಂ.ಎಸ್‌.  ಗೊಳ್ವಾಲ್ಕರ್‌ ಅವರು ಎಲ್ಲಾ ಧರ್ಮಗಳನ್ನು ಹೊಗಳಿದ್ದಾರೆ. ಎಲ್ಲೂ ಕುರಾನ್  ಬಗ್ಗೆ ಟೀಕೆ ಮಾಡಿಲ್ಲ.  ಸಂಘದ ಹಿರಿಯ ನಾಯಕ ದಿವಂಗತ ಸುದರ್ಶನ್‌ ಅವರು ನನ್ನೊಡನೆ ಅನೇಕ ಸಲ ಕುರಾನ್ ಮತ್ತು ಪ್ರವಾದಿಯವರ ಬಗ್ಗೆ ಚರ್ಚಿ­ಸಿದ್ದಾರೆ, ಪ್ರಶಂಸಿಸಿದ್ದಾರೆ.  ತಾಲಿಬಾನರನ್ನು ಇಸ್ಲಾಂ ವಿರೋಧಿಗಳೆಂದು ಮುಸ್ಲಿಮರೇ ಹೇಳು­ತ್ತಾರೆ.

ಪಾಕಿಸ್ತಾನದಲ್ಲಿ ನಿತ್ಯ ಅನೇಕ ಮಸೀದಿಗಳ ಮೇಲೆ ಬಾಂಬ್ ಹಾಕುವವರು ಆತಂಕವಾದಿ­ಗಳು. ಇದಕ್ಕೆ ಇಸ್ಲಾಂ ಧರ್ಮವನ್ನು ಟೀಕಿಸು­ತ್ತೀರಾ ಅಥವಾ ವ್ಯಕ್ತಿಗಳ ಮೇಲೆ ಪ್ರಹಾರ ಮಾಡುತ್ತೀರಾ? ಹಿಂದೂ ಧರ್ಮವನ್ನು ಇಂದು ಹಿಂದೂ­ಗಳೇ ಅವಮಾನಕ್ಕೆ ಗುರಿ ಮಾಡುತ್ತಿ­ದ್ದಾರೆ.

ಅಸ್ಪೃಶ್ಯತೆಯೆಂಬ ಪಿಡುಗು ಹಿಂದೂ ಧರ್ಮ­ದಲ್ಲಿದೆಯೇ?  ಜಾತಿ ಪದ್ಧತಿಯನ್ನು ಹಿಂದೂ ಧರ್ಮವು ಸ್ಥಾಪಿಸಿದೆಯೇ? ಯಾರೋ ಕೆಲವರು ಈ ಅನಿಷ್ಟ ಪದ್ಧತಿಯನ್ನು ಅನು­ಸರಿಸುತ್ತಿದ್ದಾರೆ. ಇದಕ್ಕೆ  ಧರ್ಮವನ್ನು ಟೀಕಿಸುವುದು ಸರಿಯೇ?

ಎಲ್ಲಾ ಧರ್ಮಗಳಲ್ಲಿ ಒಳ್ಳೆಯದನ್ನೇ ಕಾಣು­ತ್ತೇವೆ.   ಎಲ್ಲಾ ಧರ್ಮಗಳಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಕೆಟ್ಟವರನ್ನು ಕಂಡು ಅವರ ಧರ್ಮವನ್ನು ಟೀಕಿಸುವುದು ಸರಿಯೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.