ADVERTISEMENT

ಮಡೆ ಮಡೆ ಸ್ನಾನ: ಶ್ರೇಷ್ಠತೆಯ ವ್ಯಸನ

ಕೆ.ಪುರುಷೋತ್ತಮ ರೆಡ್ಡಿ ಪಾವಗಡ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಮಡೆ ಮಡೆ ಸ್ನಾನದ ಕೊಳೆಯನ್ನು ಮಾಧ್ಯ­ಮಗಳಲ್ಲಿ ತೊಳೆಯುವ ಕೆಲಸ ಸಾಕಷ್ಟು ಆಗಿಬಿಟ್ಟಿದೆ. ಕಾರ್ತಿಕೇಯನ ಭಕ್ತವೃಂದ, ಬ್ರಾಹ್ಮಣರ ಎಂಜಲೆಲೆಗೆ ಕಾದು ಅದರ ಮೇಲೆ ಉರುಳುವ ಸಂಪ್ರದಾಯದಲ್ಲಿ, ಬ್ರಾಹ್ಮಣ ಅಮುಖ್ಯವಾ­ಗುತ್ತಾ ಎಲೆ ಮಾತ್ರ ಜನಪದರ ಆಚಾರವಾಗಿ ಉಳಿ­­ದು­ಕೊಳ್ಳುತ್ತಿದೆ. ಅದರರ್ಥ–ಆಚಾರವು ಬ್ರಾಹ್ಮಣ ಶ್ರೇಷ್ಠತೆಯನ್ನಷ್ಟೇ ಅಲ್ಲದೆ, ಅದನ್ನೂ ಮೀರಿದ ಜನಪದರ ನಂಬಿಕೆ ಇಳಿ ಬೇರುಗಳಲ್ಲಿದೆ. ಬ್ರಾಹ್ಮಣ ಶ್ರೇಷ್ಠತೆ ನಿಧಾನಕ್ಕೆ ಒಂದು ರೂಪಕ ಮಾತ್ರವಾಗುತ್ತಿದೆ.

ಪಾವಗಡದ ನಾಗಲಮಡಕೆಯಲ್ಲಂತೂ ಬಸ್ಸು­ಗಳ ಏಳುಬೀಳಿನಲ್ಲಿ ಬರುವ ಬಹಳ ಜನ, ಇತ್ತೀಚೆಗೆ ಕಾರುಗಳಲ್ಲಿ ಬರುತ್ತಿರುವ ಶೂದ್ರರೂ ಬ್ರಾಹ್ಮಣರ ಎಂಜಲೆಲೆಗೆ ಕಾಯುತ್ತಾರೆ. ಉಪ­ವಾಸದ ನಂತರದ ಊಟಕ್ಕೆ ಕೂರುವ ಬ್ರಾಹ್ಮ­ಣರು–ಸದ್ಯ, ಪೂರ್ಣ ಊಟಕ್ಕೆ ಜನ ಅವಕಾಶ ಮಾಡಿಕೊಟ್ಟರೆ ಸಾಕು ಸುಬ್ರಹ್ಮಣ್ಯ ಎಂದು– ತಮ್ಮ ಶ್ರೇಷ್ಠತೆ ವ್ಯಸನಕ್ಕಿಂತ ಹಸಿವಿನ ಸಂಕ­­ಟಕ್ಕೇ– ಪೇಚಾಡಿಕೊಂಡು ಊಟಕ್ಕೆ ಕೂಡು­ವುದು ಕಾಣುತ್ತದೆ. ಎಂಜಲೆಲೆಗೆ ಕಾದವರು ಸಹ, ಶ್ರೇಷ್ಠ ಬ್ರಾಹ್ಮಣರ ಊಟ ಪ್ರಸಾದದ ವಿಸ್ಮಯದ ಎಂಜಲಿಗೇನೂ ಕಾಯುವಂತಿರುವುದಿಲ್ಲ. ಊಟ, ಮಜ್ಜಿಗೆ ಹಂತಕ್ಕೆ ಬರುವ ಹೊತ್ತಿಗೇ, ಎಡ ಕೈಯ್ಯಿಂದ ಎಲೆ ಬಿಗಿ ಹಿಡಿದು ಊಟ ಮಾಡುವ ಬ್ರಾಹ್ಮಣರ ಎಲೆಗಳನ್ನ ಜಗ್ಗಿ ಎಳಕೊಂಡು ಬರುವ ದೃಶ್ಯಗಳೂ ಇಲ್ಲಿವೆ.   ಎಲೆ ಬೇಟೆಗೆ ಬರುವವರ ಕಾಲಿಗೆ ತಾವು ಬಲಿಯಾಗುವುದನ್ನು ತಪ್ಪಿಸಿಕೊ­ಳ್ಳುವ ಆ  ಶ್ರೇಷ್ಠರ ಗಲಿಬಿಲಿಯ ಗಾಬರಿ ಪರದಾ­ಟವೂ ದಿವ್ಯ ತಮಾಷೆಯಾಗಿ ಕಾಣುತ್ತದೆ.

ಜೀತ, ಅಸ್ಪೃಶ್ಯತೆ ಇತ್ಯಾದಿಗಳು  ನಿಧಾನವಾಗಿ ಹೋಗುತ್ತವೆ ಎಂದಾದರೂ; ಬಹಳಷ್ಟು ಸಾರಿ, ನಾವೇ ಬೇರಾವುದೋ ಕಾರಣಗಳನ್ನು ಹಿಡಿದು ಜಿದ್ದಿಗೆ ಬಿದ್ದವರಂತೆ ಸಂಕ್ರಮಣ ಪ್ರಕ್ರಿಯೆ ಇನ್ನೂ ನಿಧಾನವಾಗುವಂತೆ ನೋಡಿಕೊಳ್ಳುತ್ತಿದ್ದೇವೇನೋ ಎಂದೆನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.