ಇನ್ನೇನು ವಿಧಾನಸಭಾ ಚುನಾವಣೆ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಆರಂಭಿಸಿವೆ. ಆದರೆ ನಮ್ಮ ಸಂವಿಧಾನದಲ್ಲಿ ಮತದಾನಕ್ಕೆ ಅವಕಾಶ ಇರುವಂತೆ, ಮತನಿರಾಕರಣೆಗೂ ಅವಕಾಶ ಇದೆ ಎಂಬ ಸಂಗತಿಯೇ ಬಹುತೇಕರಿಗೆ ತಿಳಿದಿಲ್ಲ. ಹಾಗಾಗಿ ಮತಗಟ್ಟೆಯಲ್ಲಿ ಇರುವ ಮತಯಂತ್ರದ ಮೇಲೆ ಮುದ್ರಿತವಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಬೇಕಾದವರಿಗೆ ಬಟನ್ ಒತ್ತುವ ಮೂಲಕ ಮತಹಾಕಿ ಬಂದು ಬಿಡುತ್ತಾರೆ.
ಆದರೆ ಬಹುತೇಕರು ಯಾವ ಅಭ್ಯರ್ಥಿಗೂ ಅರ್ಹತೆ ಇಲ್ಲ ಎಂದು ಮತಚಲಾಯಿಸಲು ಹೋಗುವುದೇ ಇಲ್ಲ. ಆದರೆ ಇದಕ್ಕೂ ಉತ್ತರವನ್ನು ಭಾರತೀಯ ಚುನಾವಣಾ ಆಯೋಗ ನೀಡಿದೆ. ಯಾವುದೇ ಅಭ್ಯರ್ಥಿ ಅರ್ಹ ಎಂದು ಅನ್ನಿಸದೇ ಇದ್ದಲ್ಲಿ, ಮತಗಟ್ಟೆಗೆ ಹೋಗಿ, ಅಲ್ಲಿನ ಅಧಿಕಾರಿಯನ್ನು ಕೋರಿದರೆ ಅವರು ನೀಡುವ ನಮೂನೆಯೊಂದರಲ್ಲಿ ಮತನಿರಾಕರಿಸುತ್ತಿದ್ದೇನೆ ಎಂದು ಬರೆದುಕೊಟ್ಟು ಬರಬಹುದು. ಇದರಿಂದ ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸಿದಂತೆ ಆಗುತ್ತದೆ.
ಇದರಿಂದ ಮತನೀಡದೆ ವಿಮುಖರಾಗುವುದೂ ತಪ್ಪುತ್ತದೆ. ಚುನಾವಣಾ ಆಯೋಗ ಮತನಿರಾಕರಣೆಯ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿ. ಪ್ರಜಾಪ್ರಭುತ್ವ ಗಟ್ಟಿಯಾಗಲು ಜನರ ಹಕ್ಕನ್ನು ಗೌರವಿಸುವುದೂ ಅತಿ ಮುಖ್ಯ ಎಂಬುದು ರಾಜಕಾರಣಿಗಳಿಗೂ ಇದರಿಂದ ಮನದಟ್ಟಾಗುತ್ತದೆ.
-ಚೇತನ ಕಂಬದ, ಬೆಂಗಳೂರು .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.