ADVERTISEMENT

ಮಲೆನಾಡಿಗೆ ಭೂ ಮಿತಿ ಕಾಯ್ದೆ ಬೇಕು

ಕೆ.ಶ್ರೀನಿವಾಸಮೂರ್ತಿ, ಶೃಂಗೇರಿ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಇತ್ತೀಚಿನ ದಶಕಗಳಲ್ಲಿ ವಿಭಜಿತ ರೈತ ಕುಟುಂಬಗಳಿಗೆ ಭೂಮಿಯ ಕೊರತೆ, ಸ್ವಂತ ಭೂಮಿ ಹೊಂದುವ ಕೃಷಿ ಕಾರ್ಮಿಕರ ಹಂಬಲ, ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಇತ್ಯಾದಿ ಕಾರಣಗಳಿಂದಾಗಿ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವ ಮಲೆನಾಡಿನ ಈ ಭಾಗದಲ್ಲಿ ಒತ್ತುವರಿ ಹಾಗೂ ಅಕ್ರಮ ಸಾಗುವಳಿ ಅನಿವಾರ್ಯವಾಯಿತು.

ಸರ್ಕಾರಗಳೂ ಇದನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಅವರ ಭೂಮಿಯನ್ನು ಸಕ್ರಮಗೊಳಿಸುವುದಾಗಿ ಘೋಷಿಸಿ ಅರ್ಜಿ ಪಡೆದವು. ಆದರೆ ಕೆಲವೇ ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಉಳಿದಂತೆ ಜಾರಿಯಾಗಿಲ್ಲ.

ಹೀಗೆ ಬಡ ರೈತರಿಗೆ ಹಾಗೂ ಭೂ ರಹಿತರಿಗೆ ತೋರಲಾದ ಅನುಕಂಪದ ಲಾಭವನ್ನು ಸಾಕಷ್ಟು ಕೃಷಿ ಭೂಮಿ ಹೊಂದಿರುವ ಶ್ರೀಮಂತರೂ, ರಾಜಕಾರಣಿಗಳೂ ಪಡೆಯುತ್ತಿದ್ದಾರೆ. ಅಕ್ರಮ ಹಾಗೂ ಅಧಿಕ ಸಂಪಾದನೆಯನ್ನು ಇನ್ನಷ್ಟು ಆಸ್ತಿ ಮಾಡಿಕೊಳ್ಳುವುದಕ್ಕಾಗಿ ಅರಣ್ಯ ಭೂಮಿಯನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡು ಕಾಫಿ ತೋಟಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಅವರ ದುರಾಸೆಯ ಫಲವಾಗಿ ಬೆಟ್ಟಗುಡ್ಡಗಳಿಂದ ಇಳಿದು ಬರುವ ಝರಿ ತೊರೆಗಳು ಬತ್ತುತ್ತಿದ್ದು ಸಾಮಾನ್ಯ ರೈತರ ಜಮೀನುಗಳಿಗೂ, ಕಾಡುಪ್ರಾಣಿಗಳಿಗೂ ನೀರು ಇಲ್ಲವಾಗುತ್ತಿದೆ.

ಅವರ ದೈತ್ಯಗಾತ್ರದ ಪಂಪ್‌ಸೆಟ್‌ಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಕೊರತೆಯಾಗಿದೆ. ಅವರು ವಿವಿಧ ಕುಟಿಲೋಪಾಯಗಳಿಂದ ಕಾರ್ಮಿಕರನ್ನು ಸೆಳೆಯುತ್ತಿದ್ದು ಸಾಮಾನ್ಯ ರೈತರಿಗೆ ಕಾರ್ಮಿಕರ ಕೊರತೆಯೂ ತಲೆದೋರಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮೀಕ್ಷೆ ನಡೆಸಿ `ಶ್ರಮಪಡಲು ಹಾಗೂ ಸಂಪಾದಿಸಲು' ಎಂಬ ಸೂತ್ರದಡಿಯಲ್ಲಿ ಬಡ ರೈತರ ಜಮೀನುಗಳನ್ನು ಸಕ್ರಮಗೊಳಿಸಿ ಉಳಿದಂತೆ ಕ್ರಮ ಜರುಗಿಸಬೇಕಾಗಿದೆ.
- ಕೆ. ಶ್ರೀನಿವಾಸಮೂರ್ತಿ ,ಶೃಂಗೇರಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT