ADVERTISEMENT

ಮಹಲಿಂಗರಂಗನ ಸಮಾಧಿ ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಕನ್ನಡದ ಮೂಲಕ ಕನ್ನಡಿಗ ತನ್ನ `ಮೋಕ್ಷ~ವ ಗಳಿಸಿಕೊಳ್ಳುವುದಾದರೆ ಸಂಸ್ಕೃತದ ಹಂಗೇನು? ಎಂದು ಪ್ರಶ್ನಿಸಿದ ಧೀಮಂತ ಕವಿ ಮಹಲಿಂಗರಂಗ. 17ನೇ ಶತಮಾನದ ಈ ಕವಿಯ `ಅನುಭವಾಮೃತ~ ಕನ್ನಡದ ಗಣ್ಯಕೃತಿಗಳಲ್ಲೊಂದು.

ಕ್ರಿ.ಶ. 1840ರಲ್ಲಿ ಮೈಸೂರು ಅರಮನೆಯ ಕಲ್ಲಚ್ಚಿನಲ್ಲಿ ಮುದ್ರಿತ ಕೃತಿಯಿಂದ ಹಿಡಿದು ಇಂದಿನವರೆಗೆ ಹತ್ತಾರು ವಿದ್ವಾಂಸರಿಂದ ಅನೇಕ ಸಲ ಸಂಪಾದಿತಗೊಂಡು ಪುನರ್ ಮುದ್ರಣಗೊಂಡಿದೆ. ಕ್ರಿ.ಶ. 1813ರಲ್ಲಿ ಸಂಸ್ಕೃತಕ್ಕೂ, ಕಳೆದ ಶತಮಾನದಲ್ಲಿ ತೆಲುಗಿಗೂ ಭಾಷಾಂತರಗೊಂಡಿದೆ.

ಕವಿಯು ದಾವಣಗೆರೆಯ ಪರಿಸರದವನು. ಜಗಳೂರು ದೇವಿಕೆರೆಯ ಸಮೀಪದ ಕೊಣಚಗಲ್ಲು ಗುಡ್ಡದಲ್ಲಿ ತಪಸ್ಸು ಮಾಡಿದ ಜಾಗ ತರುವಾಯ ರಂಗನಾಥಸ್ವಾಮಿ ದೇವಾಲಯವಾಗಿದೆ. ಕವಿಯ ಮೂಲ ಸಮಾಧಿ ಅದೇ ಪರಿಸರದಲ್ಲಿದೆ.
 
ಅಲ್ಲಿಯ ಸಮಾಧಿಯ ಮಣ್ಣನ್ನು ತಂದು ಶ್ರದ್ಧಾಳುಗಳು ದಾವಣಗೆರೆಯಲ್ಲಿ ಸಮಾಧಿ ಸ್ಮಾರಕವನ್ನು ಬಹು ಹಿಂದೆ ನಿರ್ಮಿಸಿದ್ದಾರೆ. ರೈಲು ಹಳಿಗಳ ಪಕ್ಕದಲ್ಲಿ ಗಿಡಮಗಳಿಂದ ಕೂಡಿದ್ದ ಬಹು ವಿಶಾಲ ಪ್ರಾಂಗಣ. ಸಭಾ ಮಂಟಪವನ್ನೊಳಗೊಂಡ ಈ ಸ್ಮಾರಕವು ಒತ್ತುವರಿಯಾಗಿದೆ. ಸುತ್ತ ವಸತಿ ನಿಲಯಗಳು ತಲೆ ಎತ್ತಿವೆ. 

ಸ್ಮಾರಕವೂ ಒತ್ತುವರಿಯಿಂದ ಮುಕ್ತವಾಗಬೇಕಿದೆ. ಕವಿಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ ದಾವಣಗೆರೆಯ ಪ್ರಜ್ಞಾವಂತ ಜನತೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘಟನೆಗಳು ಕೈಜೋಡಿಸಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.