ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಜನಾಶೀರ್ವಾದ ಯಾತ್ರೆ’ಗೆಂದು ನಮ್ಮೂರು ರಾಮದುರ್ಗಕ್ಕೆ ಬಂದಾಗ, ‘ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’, ‘ಸ್ವಚ್ಛ ಭಾರತ’, ಹಾಗೂ ‘ಬೇಟಿ ಬಚಾವೊ ಬೇಟಿ ಪಢಾವೊ’ ಸೇರಿದಂತೆ ಹಲವಾರು ಯೋಜನೆಗಳು ಜಾರಿಯಾಗದೆ, ಕಾಗದದಲ್ಲಿ ಉಳಿದಿವೆ’ ಎಂದಿದ್ದಾರೆ. ಆದರೆ ಈ ಎಲ್ಲಾ ಯೋಜನೆಗಳು ಈಗಾಗಲೇ ಜಾರಿಯಾಗಿವೆ.
‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಹಲವು ವಿದೇಶಿ ಕಂಪನಿಗಳು ಭಾರತದಲ್ಲಿ ತಯಾರಿಕೆಯನ್ನೂ ಆರಂಭಿಸಿವೆ. ‘ಸ್ವಚ್ಛ ಭಾರತ’ ಯೋಜನೆಗೆ ದೇಶದ ಜನರು ಬೆಂಬಲ ಸೂಚಿಸಿ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸುತ್ತಿದ್ದಾರೆ. ಊರು– ಕೇರಿಗಳು ಸಹ ಸ್ವಚ್ಛಗೊಳ್ಳುತ್ತಿವೆ.
ಯೋಜನೆ ಕಾಗದದಲ್ಲೇ ಇದೆ ಎಂದಾದರೆ, ಕಾಂಗ್ರೆಸ್ ಆಡಳಿತವಿರುವ ಪುರಸಭೆಗಳವರು ಸಹ ‘ಸ್ವಚ್ಛ ಭಾರತ’ ಮುದ್ರೆ ಇರುವ ಕಸದ ಡಬ್ಬಿಗಳನ್ನು ಮನೆಮನೆಗೆ ಯಾಕೆ ವಿತರಿಸಿದ್ದಾರೆ? ನಮ್ಮ ಶಾಸಕರು ರಾಹುಲ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲವೇ?
ಮತ, ಅಧಿಕಾರಗಳಿಗಾಗಿ ಹುಸಿ ಮಾತುಗಳ ಮೂಲಕ ಜನರನ್ನು ದಾರಿ ತಪ್ಪಿಸುವುದು ಸಮಂಜಸವಲ್ಲ. ಸಣ್ಣ ಗ್ರಾಮದಲ್ಲಿರುವವರಿಗೂ ಈ ಮಾಹಿತಿ ತಿಳಿದಿರುವಾಗ, ರಾಹುಲ್ ಗಾಂಧಿಗೆ ಏಕೆ ತಿಳಿದಿಲ್ಲ? ಅವರಿನ್ನೂ ಅಜ್ಞಾತವಾಸದಿಂದ ಹೊರಗೆ ಬಂದಂತೆ ಕಾಣುತ್ತಿಲ್ಲ.
–ವಿನಾಯಕ ಲ್ಯಾವಿ, ರಾಮದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.