‘ನಾನು ಹಿಂದೂ ಮುಖಂಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆದರೆ, ನನ್ನ ಪ್ರಕಾರ ಮೊದಲು ಟಾಯ್ಲೆಟ್ ನಿರ್ಮಾಣ, ಬಳಿಕ ದೇವಾಲಯ ನಿರ್ಮಾಣ’. ಇದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ.
ನಾನು ಹಿಂದೂ ಮುಖಂಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರು, ಹಿಂದೂ ಸಂಸ್ಕೃತಿಯ ಅವಿಭಾಜ್ಯ ಭಾಗವಾದ ದೇವಾಲಯ ನಿರ್ಮಾಣದ ಬಗೆಗಿನ ಶ್ರದ್ಧೆಯನ್ನು ಅವಗಣಿಸುತ್ತಿಲ್ಲ. ದೇಶದ ಪ್ರಗತಿಯಲ್ಲಿ ಒಂದು ಕಪ್ಪುಚುಕ್ಕೆಯಾಗಿರುವುದು ಗ್ರಾಮೀಣ ಭಾಗದಲ್ಲಿ ಮನೆಗೊಂದು ಕಕ್ಕಸು ಇಲ್ಲದೆ ರಸ್ತೆಬದಿಯಲ್ಲಿ ಹೊತ್ತು ಮುಳುಗಿದ ಮೇಲೆ ಕತ್ತಲೆಯಲ್ಲಿ, ಬೆಳಗಾಗುವ ಮೊದಲಿಗೆ ಕತ್ತಲೆಯಲ್ಲಿ ಹೆಣ್ಣುಮಕ್ಕಳು ಬಹಿರ್ದೆಸೆಗೆ ಹೋಗುವುದು ಸ್ವಾತಂತ್ರ್ಯ ಬಂದು ಅರವತ್ತಾರು ವರ್ಷಗಳಾದರೂ ಇದರಿಂದ ತಪ್ಪಿಲ್ಲದಿರುವುದು. ಮೋದಿಯವರ ಈ ಮಾತು ಜನಪ್ರಿಯತೆಗಾಗಿ, ಪ್ರಚಾರದ ಗೀಳಿನಿಂದ ಆಡಿದ ಕೃತಕ ಮಾತೆಂದು ನನಗನ್ನಿಸುವುದಿಲ್ಲ.
ಅಭಿವೃದ್ಧಿಯ ಬಗೆಗೆ ಚಿಂತಿಸುವ ರಾಜಕಾರ ಣಿಗೆ ಇಂತಹ ಆಲೋಚನೆ ಬರುವುದು ಸಹಜ. ದೇವಾಲಯ ಸಂಸ್ಕೃತಿ ಊಳಿಗಮಾನ್ಯ ಸಂಸ್ಕೃತಿ ಯಾದರೂ ಮೋದಿಯವರು ದೇವಾಲಯ ನಿರ್ಮಾಣವನ್ನು ವಿರೋಧಿಸುತ್ತಿಲ್ಲ. ಏಕೆಂದರೆ, ಅವರು ಆರ್ಎಸ್ಎಸ್ನ ಅವಿಭಾಜ್ಯ ಭಾಗ; ದೇವಾಲಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರು ವುದು ಕೇಸರಿ ಬಾವುಟ. ಅದೇನೇ ಇರಲಿ, ಮೋದಿ ಯವರ ಕನಸಿನ ಗ್ರಾಮೀಣ ಭಾರತಕ್ಕೆ ತುರ್ತಾಗಿ ಅಗತ್ಯವಿರುವುದು ಅವರ ಮರ್ಯಾದೆಯನ್ನು ಕಾಪಾಡುವ ಕಕ್ಕಸು (ಟಾಯ್ಲೆಟ್).
ಮೋದಿಯವರ ಈ ವಿಚಾರಧಾರೆಯನ್ನು ಯೋಚಿಸುತ್ತಿದ್ದಾಗ ನನಗೆ ಫಕ್ಕನೆ ಹೊಳೆದದ್ದು ಪಟೇಲರ ಅಧಿಕಾರಾವಧಿಯಲ್ಲಿ ಗ್ರಾಮೀಣಾ ಭಿವೃದ್ಧಿ ಮಂತ್ರಿಯಾಗಿದ್ದ ನನ್ನ ಆತ್ಮೀಯ ಗೆಳೆಯ ಎಂ.ಪಿ. ಪ್ರಕಾಶ್ರವರ ಪ್ರಗತಿಪರ ಚಿಂತನೆ. ಅವರಿಗೆ, ಕತ್ತಲೆಯಾಗುತ್ತಲೇ ಹಳ್ಳಿಯ ಹೆಣ್ಣು ಮಕ್ಕಳು ಸಂಕೋಚದಿಂದ ಬಹಿರ್ದೆಸೆಗೆ ಕೂರು ತ್ತಿದ್ದ ಆ ದೃಶ್ಯ ಅಸಹನೀಯವಾಗಿ ಕಂಡಿತು. ಅವರು ಹಳ್ಳಿಹಳ್ಳಿಗಳಲ್ಲಿ ಸಾಮೂಹಿಕವಾಗಿ ಬಳ ಸುವ ಕಕ್ಕಸು ನಿರ್ಮಾಣ ಯೋಜನೆ ಜಾರಿಗೆ ತಂದರು. ಊರ ಹೊರಗೆ ಕಕ್ಕಸುಗಳ ನಿರ್ಮಾಣವಾದವು.
ಅವರ ಈ ಪ್ರಗತಿಪರ ನಿಲವನ್ನು ಲಂಕೇಶ್ ಲೇವಡಿ ಮಾಡುತ್ತ ಪ್ರಕಾಶ್ರವರನ್ನು ‘ಕಕ್ಕಸು ಮಂತ್ರಿ’ ಎಂದು ಕಿಚಾಯಿಸಿದ್ದು ನನ್ನ ನೆನಪಿನಲ್ಲಿದೆ. ಎಂ.ಪಿ. ಪ್ರಕಾಶರ ಗ್ರಾಮೀಣ ಕಕ್ಕಸ್ಸಿನ ಪರಿಕಲ್ಪನೆ ಹೊಸದು. ಅದು ಜಾರಿಗೆ ಬಂದ ಮೇಲೆ ಅವುಗಳ ಬಳಕೆ ಯಾವ ರೀತಿಯಲ್ಲಾಯಿತು ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ. ಈ ಹೊತ್ತು ಆ ಕಕ್ಕಸುಗಳ ಹಾಳುಗೆಟ್ಟ ಸ್ಥಿತಿ ನೆನೆಸಿಕೊಂಡರೆ ನಮ್ಮ ಅಭಿವೃದ್ಧಿ ಮಂತ್ರಗಳು ಮಂತ್ರಗಳಾಗಿ ನೆನಪಿನಿಂದ ಮಾಸಿಹೋಗುತ್ತವೆ. ನಾಯಕರ ಅಭಿವೃದ್ಧಿಯ ಕನಸುಗಳನ್ನು ಅರ್ಥ ಮಾಡಿಕೊಂಡು ಅವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ವಿವೇಕವೂ ಬೇಕಲ್ಲವೆ? ಎಂ.ಪಿ. ಪ್ರಕಾಶರ ಕನಸಿನ ಕೂಸು ರೋಗಗ್ರಸ್ತವಾದಂತೆ, ಮೋದಿಯವರ ಕನಸೂ ಆ ಹಾದಿ ಹಿಡಿದರೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.