ADVERTISEMENT

ರಾಜಕಾರಣಿಗಳ ಜಾತಿ...

ಪ್ರೊ.ಶಿವರಾಮಯ್/ಬೆಂಗಳೂರು
Published 22 ಮೇ 2018, 19:30 IST
Last Updated 22 ಮೇ 2018, 19:30 IST

ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಾ ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ನಮ್ಮ ಪಕ್ಷವೇ ಗೆಲುವು ಸಾಧಿಸಿ, ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕು’ ಎಂದು ಕರೆಕೊಟ್ಟಿದ್ದಾರೆ (ಪ್ರ.ವಾ., ಮೇ 18).

ಸರಿಯೇ, ಆದರೆ ಅವರು ತಮ್ಮ ಹಿಂದಣ ಹೆಜ್ಜೆಯನ್ನು ಮರೆತಂತಿದೆ. 2013ರ ಚುನಾವಣೆ ಸಂದರ್ಭದಲ್ಲಿ ಇವರು ಕಮಲವನ್ನು ಸೀಳಿ ಕೆಜೆಪಿಯನ್ನು ಹುಟ್ಟು ಹಾಕಿ, ಬಿಜೆಪಿ ಸೋತಮೇಲೆ ಪುನಃ ಅದನ್ನೇ ಬಾಚಿ ತಬ್ಬಿಕೊಂಡುದನ್ನು ಮರೆತಿದ್ದಾರೆ. ಈಗ ‘ಜೆಡಿಎಸ್ ಮತ್ತು ಕಾಂಗ್ರೆಸ್‍ನವರು ಅಧಿಕಾರ ಲಾಲಸೆಯಿಂದ ಪರಸ್ಪರ ಬಾಚಿ ತಬ್ಬಿಕೊಂಡಿದ್ದಾರೆ’ ಎಂದು ಲೇವಡಿ ಮಾಡುತ್ತಾರೆ. ಹಾಗಾದರೆ ಹಿಂದೆ ಇವರು ಮಾಡಿದ್ದೇನು?

ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹಾವು ಮುಂಗುಸಿಯಂತೆ ವರ್ತಿಸಿ ಈಗ ಮೈತ್ರಿ ಸರ್ಕಾರ ರಚಿಸಲು ಮುಂದಾಗಿರುವುದನ್ನು ನೋಡಿದರೆ, ‘ಚುನಾವಣೆಗೆ ಮೊದಲೇ ಈ ಬುದ್ಧಿ ಇದ್ದಿದ್ದರೆ ಆಗುತ್ತಿರಲಿಲ್ಲವೇ?’ ಎಂದೆನಿಸುತ್ತದೆ. ಆದ್ದರಿಂದ ‘ರಾಜಕಾರಣಿಗಳ ಜಾತಿ ತಾನೊಂದೆ ವಲಂ’ ಎಂದರೆ ಹೆಚ್ಚು ಸೂಕ್ತ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.