ADVERTISEMENT

ರಾಜ್ಯ ಈಗೇಕೆ ಅಪಥ್ಯ?

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ರಾಜ್ಯದ ಹಿತಕ್ಕಿಂತ ಪ್ರಜಾಪ್ರಭುತ್ವ ಮುಖ್ಯವಾದುದು ಎಂದು ಇನ್‌ಫೋಸಿಸ್‌ನ ಸ್ಥಾಪಕರಾದ ನಾರಾಯಣಮೂರ್ತಿರವರು ಫರ್ಮಾನು ಹೊರಡಿಸಿದ್ದಾರೆ. ಅದಾದರೂ ಹೆಗ್ಗೋಡಿನ ನೀನಾಸಂನಲ್ಲಿ ನಡೆದ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಈ ಮುತ್ತಿನ ನುಡಿ ಹೊರಬಿದ್ದಿರುವುದು ಗಮನಿಸಬೇಕಾದುದು. ಕರ್ನಾಟಕದ ಎಲ್ಲಾ ಮೂಲಭೂತ ಸೌಲಭ್ಯಗಳು, ಸರ್ಕಾರಿ ತೆರಿಗೆ ವಿನಾಯಿತಿ ಎಲ್ಲವೂ ಬೇಕು.
ಸರ್ಕಾರದಿಂದ ಕಡಿಮೆ ದರದಲ್ಲಿ ಜಮೀನು, ನೀರು, ವಿದ್ಯುತ್ ಮುಂತಾದ ಸವಲತ್ತುಗಳನ್ನೆಲ್ಲಾ ಪಡೆದ ಇವರಿಗೆ ಉದ್ಯೋಗದ ಸಂದರ್ಭದಲ್ಲಿ ಮಾತ್ರ ಈ ನೆಲದ ಅಸಂಖ್ಯಾತ ನಿರುದ್ಯೋಗಿಗಳು ಕೆಲಸಕ್ಕೆ ಬಾರದವರಾಗುತ್ತಾರೆ. 

ಆಗ ಮಾತ್ರ ರಾಜ್ಯದ ಹಿತಕ್ಕಿಂತ ಪ್ರಜಾಪ್ರಭುತ್ವದ ಹಾಗೂ ಪ್ರತಿಭೆಯ ಮಾನದಂಡದ ಮಾತನಾಡುವರು. ಸರ್ಕಾರದ ಎಲ್ಲಾ ರಿಯಾಯಿತಿ ಮತ್ತು ಸವಲತ್ತನ್ನು ಅನುಭವಿಸುತ್ತಿರುವ ಇವರು ಮೀಸಲಾತಿಯನ್ನು ನಿರಾಕರಿಸುವ ಮಾತನಾಡಿದ್ದಾರೆ.
ನಾರಾಯಣಮೂರ್ತಿ ಹಾಗೂ ಇತರ ಐಟಿ-ಬಿಟಿ ದಿಗ್ಗಜರು ಯಾವ ಬಹುರಾಷ್ಟ್ರೀಯ ಕಂಪೆನಿಗಳಿಗಿಂತಲೂ ಕಡಿಮೆ ಏನೂ ಇಲ್ಲ. ಅದೂ ಸಂಸ್ಕೃತಿ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದನ್ನು ಕಿವಿಯಾರೆ ಕೇಳಿದ ಸಂಸ್ಕೃತಿ ಚಿಂತಕರ ಅಂಬೋಣ ಅವರವರ ಊಹೆಗೆ ಬಿಟ್ಟಿದ್ದು. ನಾರಾಯಣಮೂರ್ತಿಯವರ ಫರ್ಮಾನಿಗೆ ಸಂಸ್ಕೃತಿ ಶಿಬಿರದ ಸಭಾಧ್ಯಕ್ಷರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿರವರ ಅಂಬೋಣ ಏನೆಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT