ವಾಲ್ಮೀಕಿ ರಾಮಾಯಣ ಪರಿಪೂರ್ಣ ಕಾವ್ಯ (ಪ್ರ.ವಾ., ನ. 26). ಹೀಗೆ ಅಭಿಪ್ರಾಯಿಸಿದ ಡಾ. ಚಂದ್ರಶೇಖರ ಕಂಬಾರರು, ಮಹಾಭಾರತಕ್ಕೆ ಶ್ಲೋಕ ಸೇರಿಸಿದಂತೆ ರಾಮಾಯಣವನ್ನು ಬೆಳೆಸಲಿಲ್ಲ ಎಂದು ಹೇಳಿದರೆಂದು ವರದಿಯಾಗಿದೆ.
ವಾಸ್ತವವಾಗಿ, ರಾಮಾಯಣದ ಬಾಲಕಾಂಡದ ಬಹುಭಾಗ ಪ್ರಕ್ಷಿಪ್ತವೆಂದು ವಿದ್ವಾಂಸರ ನಿರ್ಣಯ. ಅಲ್ಲಿ ಬರುವ ರಾಮನ ಅವತಾರದ ಕಲ್ಪನೆ ಮೂಲದ್ದಲ್ಲ. ಆತ್ಮಾನಂ ಮಾನುಷಂ ಮನ್ಯೇ (ನಾನು ಮನುಷ್ಯನೆಂದು ತಿಳಿಯುತ್ತೇನೆ) ಎಂದು ರಾಮನೆ ಹೇಳುವುದು ಗಮನಾರ್ಹ. ಇನ್ನು, ಉತ್ತರಕಾಂಡವಂತೂ ವಾಲ್ಮೀಕಿ ಕೃತವಲ್ಲ ಎಂಬುದು ಸರ್ವಸಮ್ಮತ.
ಭಗವದ್ಗೀತೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದೂ ಕಂಬಾರರು ಭಾರತದ ಬಗೆಗೆ ಹೇಳಿದ್ದಾರೆ. ಗೀತೆ ಮಹಾಭಾರತದ ಅವಿಭಾಜ್ಯ ಅಂಗ ಎಂಬುದಕ್ಕೆ ಅನೇಕ ಆಧಾರಗಳಿವೆ. (ಗೀತೆ ಬರುವುದು ಭೀಷ್ಮ ಪರ್ವದಲ್ಲಿ. ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದನೆಂದು ಶಾಂತಿಪರ್ವದಲ್ಲಿ ಉಕ್ತವಾಗಿದೆ). -ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.