‘ವಕೀಲರಿಗೆ ತೊಡಕಾದ ಕಾನೂನು’ (ವಾವಾ ಡಿ. 15) ಶೀ ರ್ಷಿಕೆಯಲ್ಲಿ ಮೈಸೂರಿನ ಕೃಷ್ಣ ಮತ್ತಿತರರು ಬರೆದಿರುವ ಪತ್ರ ಕುರಿತು ಸ್ಪಷ್ಟೀಕರಣ.1983ನೇ ಇಸವಿಯಿಂದಲೇ ಜಾರಿಗೆ ಬಂದಿರುವ ಕರ್ನಾಟಕ ವಕೀಲರ ಕ್ಷೇಮಾಭಿವೃದ್ಧಿ ಕಾಯ್ದೆಗೆ ಈ ವರ್ಷ ಕರ್ನಾಟಕ ವಿಧಾನ ಮಂಡಲ ತಿದ್ದುಪಡಿ ಮಾಡಿ, ವಕೀಲರ ಕ್ಷೇಮಾಭಿವೃದ್ಧಿ ಮೊತ್ತವನ್ನು ರೂ.1.5ಲಕ್ಷ ದಿಂದ ರೂ.4 ಲಕ್ಷ ಗಳಿಗೆ ಏರಿಸಿದೆ.
ಈ ಕ್ಷೇಮಾಭಿವೃದ್ಧಿ ನಿಧಿಯನ್ನು ಪಡೆಯಲಿಚ್ಚಿಸುವವರು ಪ್ರತಿ ವರ್ಷ ನಿಗದಿತ ಶುಲ್ಕವನ್ನು ಕ್ಷೇಮಾಭಿವೃದಿ ನಿಧಿಗೆ ಪಾವತಿಸಬಹುದು. ಇದರಲ್ಲಿ ಯಾವುದೇ ಕಡ್ಡಾಯವಿಲ್ಲ. ವಕೀಲರು ಸ್ವ ಇಚ್ಚೆಯಿಂದ ಈ ಯೋಜನೆಯ ಸದಸ್ಯರಾಗ ಬಯಸಿದ್ದಲ್ಲಿ, 15 ವರ್ಷದೊಳಗೆ ವಕೀಲಿ ವೃತ್ತಿ ಮಾಡುತ್ತಿರುವವರು ಪ್ರತಿ ವರ್ಷ ಐದು ನೂರು ರೂಪಾಯಿಗಳನ್ನು ಮತ್ತು 15ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದ ವಕೀಲರು ಒಂದು ಸಾವಿರ ರೂಪಾಯಿಗಳನ್ನು ಪಾವತಿಸಬಹುದು.
ಕೃಷ್ಣ ಮತ್ತಿತರರು ಬರೆದಿರುವ ಪತ್ರದಲ್ಲಿ 15 ವರ್ಷಗಳ ವಕೀಲಿ ವೃತ್ತಿಯನ್ನು ಮಾಡಿರುವವರು ಮಾಸಿಕ 1,000 ರೂಗಳನ್ನು ಹಾಗೂ 15 ವರ್ಷಗಳ ಒಳಗೆ ಇರುವವರು 5,000 ರೂಗಳನ್ನು ಪಾವತಿಸಬೇಕು ಎಂದು ತಪ್ಪಾಗಿ ತಿಳಿಸಲಾಗಿದೆ.
‘ಕ್ಷೇಮಾಭಿವೃದ್ಧಿ ಮೊತ್ತವನ್ನು ನಿಗದಿತ ಸಮಯದೊಳಗೆ ಪಾವತಿಸದಿರುವ ವಕೀಲರನ್ನು ವಕೀಲ ವೃತ್ತಿಯಿಂದ aಮಾನತ್ತುಗೊಳಿಸಲಾಗುತ್ತದೆ’ ಎನ್ನುವುದು ಸರಿಯಲ್ಲ.
ಕ್ಷೇಮಾಭಿವೃದ್ಧಿ ನಿಧಿಯ ಸದಸ್ಯತ್ವಕ್ಕೂ ವಕೀಲಿ ವೃತ್ತಿಯನ್ನು ನಡೆಸುವ ಹಕ್ಕಿಗೂ ಯಾವುದೇ ಸಂಬಂಧವಿಲ್ಲ. ಕ್ಷೇಮಾಭಿವೃದ್ಧಿ ನಿಧಿಯ ಶುಲ್ಕವನ್ನು ಪಾವತಿಸದೇ ಇರುವ ವಕೀಲರನ್ನು ಅಮಾನತ್ತುಪಡಿಸುವ ಯಾವುದೇ ವಿಧಿಯು ಕಾಯ್ದೆಯಲ್ಲಿ ಇಲ್ಲ. ಆದರೆ ಈಗಿರುವ ರೂ 4ಲಕ್ಷವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ವಕೀಲರ ಸಮುದಾಯ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.