ADVERTISEMENT

ವಚನ ಸಂಪುಟ: ವಿಳಂಬ ಬೇಡ

ಎಸ್‌.ವಿದ್ಯಾಶಂಕರ, ಬೆಂಗಳೂರು
Published 29 ಜೂನ್ 2014, 19:30 IST
Last Updated 29 ಜೂನ್ 2014, 19:30 IST

ಸಮಗ್ರ ವಚನ ಸಂಪುಟದ ಮೂರನೇ ಪರಿಷ್ಕೃತ ಮುದ್ರಣಕ್ಕೆ ಕರ್ನಾಟಕ  ಸರ್ಕಾರ ಹಣ ಬಿಡು­ಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಡಾ. ಸಿದ್ಧ­ಲಿಂಗಯ್ಯನವರು ಮೂರನೇ ಪರಿಷ್ಕೃತ ಮುದ್ರಣ ಜಾರಿಗೆ ತರಲು ತಮ್ಮ ಅಧಿಕಾರಾ­ವಧಿಯಲ್ಲಿ ಸಂಪಾದಕ ಮಂಡಲಿಯ ಸಭೆ ಕರೆದು ಮಾಡ­ಬೇಕಾದ ಕಾರ್ಯಗಳ ಬಗೆಗೆ ಚರ್ಚಿಸಿ, ತೀರ್ಮಾನ ತೆಗೆದುಕೊಂಡಿದ್ದರು.

ಆ ಸಭೆಯಲ್ಲಿ ನಾನು ಮತ್ತು ಡಾ. ಎಂ. ಎಂ.ಕಲಬುರ್ಗಿ ಭಾಗ­ವಹಿಸಿದ್ದೆವು. ಇದಾಗಿ ವರ್ಷಗಳೇ ಕಳೆದವು. ಈಗ ಬೇರೆ ಅಧ್ಯಕ್ಷರನ್ನು ಸರ್ಕಾರ ನೇಮಕ ಮಾಡಿದೆ.  ಅವರು ‘ಆನು ದೇವಾ ಹೊರಗಣ­ವನು....’ ಎನ್ನುವ  ಚರ್ಚಾಸ್ಪದ ಕೃತಿ ಬರೆದು ಬಸವಣ್ಣ­ನವರ ವ್ಯಕ್ತಿತ್ವಕ್ಕೆ ಮಸಿ ಬಳಿದಿದ್ದರು. ಒಂದು ಸಮು­ದಾಯದ ಭಾವನೆಗಳನ್ನು ಕೆರಳಿಸಿದ ಕಾರಣಕ್ಕಾಗಿ ಆ ಕೃತಿಯ ಮುಟ್ಟುಗೋಲಿಗೆ ಒಂದು ಸಂಘಟನಾತ್ಮಕ ಚಳವಳಿ ರೂಪದ ಪ್ರತಿಭಟನೆ­ಯನ್ನು ನಾಡಿನಾದ್ಯಂತ   ಮಾಡಲಾ­ಯಿತು.

ಇದರ ಬಿಸಿ ತಾಗಿದ ಮೇಲೆ ಸರ್ಕಾರ ಆ ಕೃತಿಯ ಮುಟ್ಟುಗೋಲು ಹಾಕುವ ಆಜ್ಞೆ ಹೊರಡಿಸಿತು. ಇದು ಹಳೆಯ ಕಥೆ. ಪ್ರಚೋದ­ನಕಾರಿ ಕೃತಿ ರಚಿ­ಸಿದ ವ್ಯಕ್ತಿಯನ್ನು ಸರ್ಕಾರ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇವರ ನೇತೃತ್ವದಲ್ಲಿ ಸಮಗ್ರ ವಚನ ಸಾಹಿತ್ಯ ಪ್ರಕಟಣ ಯೋಜನೆ ಜಾರಿಗೆ ಬರಬೇಕಿದೆ. ಸಂಪಾದಕ ಮಂಡಲಿಯ ಸದಸ್ಯನಾಗಿ ನಾನು ಅವರಿಗೊಂದು ಪತ್ರ ಬರೆದು ಆ ಯೋಜನೆಯ ಕಾರ್ಯ ಎಲ್ಲಿಗೆ ಬಂದಿದೆ? ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ಒಂದು ಸಭೆ ಕರೆಯಿರಿ ಎಂದು ವಿನಂತಿಸಿದ್ದೆ. ಇದುವರೆವಿಗೂ ಅವರಿಂದ ಉತ್ತರವಿಲ್ಲ.

ಅವರು ನಿಧಾನತಂತ್ರ ಬಳಸುವ ಮೂಲಕ ಯೋಜನೆಗೆ ಮಂಜೂರಾಗಿರುವ ಹಣ ಬಳಕೆಯಾಗದೆ, ಸರ್ಕಾರ ಎಲ್ಲಿ ಅದನ್ನು ಹಿಂಪಡೆಯುತ್ತದೋ ಎನ್ನುವ ಆತಂಕ ನನ್ನದು. ಹಿಂದೆ ಮಂಜೂರಾದ ಹಣ ಸಿದ್ಧಲಿಂಗಯ್ಯನವರ ಸೋಮಾರಿತನದಿಂದಾಗಿ ಬಳಕೆಯಾಗದೆ ಸರ್ಕಾರಕ್ಕೆ ಮರಳಿ ಹೋದದ್ದರ ಕಹಿ ನೆನಪು ಮಾಸಿಲ್ಲ. ಈಗ ಹಾಲಿ ಅಧ್ಯಕ್ಷರ ಸರದಿ ಬಂದಿದೆ.

ಎರಡನೇ ಪರಿಷ್ಕೃತ ಮುದ್ರಣದ ಸಂದರ್ಭದಲ್ಲಿ ಪ್ರೊ. ಮಲ್ಲೇಪುರಂ ವೆಂಕಟೇಶ್‌ ಭ್ರಷ್ಟಾಚಾರ ನಡೆಸಿ, ಅದರ ಬಗೆಗೆ ವಿಚಾರಮಾಡಲು ಸರ್ಕಾರ ಒಂದು ಕಮಿಟಿ ನೇಮಕ ಮಾಡಿತ್ತು. ಆ ಕಮಿಟಿ ಅವರನ್ನು ತಪ್ಪಿತಸ್ಥರೆಂದೂ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದೂ ಸರ್ಕಾರಕ್ಕೆ ಶಿಫಾರಸು ಮಾಡಿತು. (ಅದರ ಪ್ರತಿಯನ್ನು ನಾನು ನೋಡಿರು­ವೆನು, ಕನ್ನಡ ಪುಸ್ತಕ ಪ್ರಾಧಿಕಾರದ ಕಡತದಲ್ಲಿ ಅದು ಇದೆ).

ಈ ಹಿನ್ನೆಲೆಯಲ್ಲಿ ಸಮಗ್ರ ವಚನ ಸಾಹಿ­ತ್ಯದ ಪರಿಷ್ಕೃತ ಮೂರನೇ ಮುದ್ರಣವನ್ನು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಿಂಪಡೆದು ಮೊದಲ ಮುದ್ರಣವನ್ನು ಪ್ರಕಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೇ ವಹಿಸಿಕೊಡುವುದು ಸರಿ­ಯಾದ ಕ್ರಮವೆಂದು ತೋರುತ್ತದೆ.  ಇದು ಈ ಕೆಲಸ ಪಾರದರ್ಶ­ಕವಾಗಿ ಜರುಗಲು ಇರುವ ಏಕೈಕ ಮಾರ್ಗ.
–ಎಸ್‌. ವಿದ್ಯಾಶಂಕರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.