ADVERTISEMENT

ಶ್ರವಣಬೆಳಗೊಳದಲ್ಲಿ ಕಲಿತ ಪಾಠ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST

ಶ್ರವಣಬೆಳಗೊಳದಲ್ಲಿ ಗೊಮ್ಮಟೇಶನ ಮಹಾಮಸ್ತಕಾಭಿಷೇಕ ನೋಡಲು ಗಂಡನ ಜೊತೆ ಹೋಗಿದ್ದೆ. ನಮಗೆ ಉಳಿದುಕೊಳ್ಳಲು ಸಿಕ್ಕ ಜಾಗದ ಹೆಸರು ಕಲಶನಗರ. ಅಲ್ಲಿಯೇ ನಮ್ಮ ಊಟ, ತಿಂಡಿಗೂ ವ್ಯವಸ್ಥೆ ಇತ್ತು. ನಾನು ಬೆಳಿಗ್ಗೆ ಉಪಾಹಾರ ಮಾಡುವಾಗ ಎರಡು ಚಪಾತಿ ಹಾಕಿಸಿಕೊಂಡಿದ್ದೆ. ಒಂದನ್ನು ತಿಂದಿದ್ದೆ.

ಇನ್ನೊಂದನ್ನು ತಿನ್ನಲಾಗಲಿಲ್ಲ. ಕಾರಣ, ಅದು ಸ್ವಲ್ಪ ಗಟ್ಟಿ ಎನಿಸಿತು ಅಥವಾ ಇಡ್ಲಿ-ವಡ, ಪೂರಿ, ರಸಗುಲ್ಲ, ಕಲ್ಲಂಗಡಿ, ಕರಬೂಜ, ಬಾಳೆಹಣ್ಣು... ಹೀಗೆ ವಿವಿಧ ಹಣ್ಣುಗಳು, ತಿಂಡಿ ತಿನಿಸುಗಳು ಇದ್ದುದರಿಂದ, ಎಲ್ಲವನ್ನೂ ಹಾಕಿಸಿಕೊಂಡು ಹೊಟ್ಟೆ ತುಂಬಿಹೋಗಿದ್ದರಿಂದಲೂ ಇರಬಹುದು. ಒಟ್ಟಿನಲ್ಲಿ ಒಂದು ಚಪಾತಿಯನ್ನು ನಾನು ತಟ್ಟೆಯಲ್ಲೇ ಬಿಟ್ಟೆ.

ಎಸೆಯಲು ಹೋದಾಗ ಅಲ್ಲಿ ಕಾರ್ಯಕರ್ತರು ನಿಂತಿದ್ದರು. ನನ್ನ ತಟ್ಟೆಯನ್ನು ನೋಡಿ, ‘ಆಹಾರವನ್ನು ಎಸೆಯುವಂತಿಲ್ಲ. ಇದು ಇನ್ನೊಬ್ಬರ ಹೊಟ್ಟೆ ತುಂಬಿಸುತ್ತಿತ್ತಲ್ಲ? ದಯವಿಟ್ಟು ತಿನ್ನಿ’ ಎಂದು ತಿನ್ನಿಸಿದರು. ನನಗೆಂದು ಅಲ್ಲ ಅಲ್ಲಿ ಯಾರ‍್ಯಾರು ಆಹಾರ ಪದಾರ್ಥವನ್ನು ಎಸೆಯುತ್ತಿದ್ದರೋ ಅವರೆಲ್ಲರಿಗೂ ತಿನ್ನಿಸಿಯೇ ಬಿಡುತ್ತಿದ್ದರು.

ADVERTISEMENT

ಒಬ್ಬರು ತಮ್ಮ ಗಿಣ್ಣಲಿನಲ್ಲಿ ಅರ್ಧ ಸಾಂಬಾರು ಬಿಟ್ಟಿದ್ದರು. ಅದನ್ನು ಅವರು ತಿನ್ನಲು ಒಪ್ಪಲಿಲ್ಲ. ಆಗ ಆ ಕಾರ್ಯಕರ್ತರು ತಾವೇ ಸ್ವತ: ಅದನ್ನು ಕುಡಿದು ನಮಗೆ ಮಾದರಿಯಾದರು.

ನನಗೆ ಮತ್ತು ನನ್ನಂತೆ ಆಹಾರ ಪದಾರ್ಥವನ್ನು ಪೋಲು ಮಾಡುವವರಿಗೆ ಇದು ಒಂದು ಪಾಠ. ಆ ಕಾರ್ಯಕರ್ತರಿಗೆ ನಮನ.
–ಸಹನಾ ಕಾಂತಬೈಲು, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.