ಶ್ರೀನಗರದಿಂದ ಶಿವಾಜಿನಗರ ಮಧ್ಯೆ ಸಂಚರಿಸುವ ಬಸ್ಗಳ ಸಂಖ್ಯೆಯನ್ನು ಇತ್ತೀಚಿನ ದಿನಗಳಲ್ಲಿ ಹಠಾತ್ತಾಗಿ ರದ್ದುಪಡಿಸಲಾಗಿದೆ.
ಈ ಬಸ್ಗಳನ್ನೆ ನೆಚ್ಚಿಕೊಂಡಿರುವ ಅಸಂಖ್ಯ ಪ್ರಯಾಣಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಬೆಳಿಗ್ಗೆ 11.20, ಮಧ್ಯಾಹ್ನ 2.20ಕ್ಕೆ ಶ್ರೀನಗರದಿಂದ ಹೊರಡುತ್ತಿದ್ದ ಬಸ್ಗಳು ಏಕಾಏಕಿ ಸಂಚಾರವನ್ನೇ ನಿಲ್ಲಿಸಿವೆ. ಬರೀ ಚಾಲಕ ಇದ್ದ ಇನ್ನೊಂದು ಪುಷ್ಪಕ್ ಬಸ್ ಕೂಡ ಬರುತ್ತಿಲ್ಲ. ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ.
ಶ್ರೀನಗರ - ಶಿವಾಜಿನಗರ ಮಧ್ಯೆ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದು ಹೀಗೆ ಬಸ್ಗಳನ್ನು ಹಠಾತ್ತಾಗಿ ರದ್ದುಪಡಿಸಿದ್ದರಿಂದ ತೀವ್ರ ಅನಾನುಕೂಲವಾಗಿದೆ.
ಶಿವಾಜಿನಗರದ ಫಲಕ ಇರುವ ಕೆಲ ಬಸ್ಗಳು ಶಾಂತಿ ನಗರ ಬಸ್ ನಿಲ್ದಾಣಕ್ಕೆ ನಿಂತು ಬಿಡುತ್ತವೆ. ಇದರ ಜತೆಗೆ ಶಿವಾಜಿನಗರದಿಂದ ಶ್ರೀನಗರ, ಗಿರಿನಗರ ಕಡೆಗೆ ರಾತ್ರಿ 9.30ರ ನಂತರ ಬಸ್ಗಳು ನಿಯಮಿತವಾಗಿಯೂ ಸಂಚರಿಸುವುದಿಲ್ಲ. ರಾತ್ರಿ 10 ಗಂಟೆಗೆ ಶಿವಾಜಿನಗರದಿಂದ ಹೊರಡುತ್ತಿದ್ದ `37ಇ~ ಬಸ್ ಕೂಡ ನಿಯಮಿತವಾಗಿ ಹೊರಡುವುದಿಲ್ಲ. ವಾರದಲ್ಲಿ ಎರಡು ಮೂರು ದಿನ ಮಾತ್ರ ಮುಖ ತೋರಿಸುತ್ತದೆ.
ವರ್ಷಗಳಿಂದ ಈ ಬಸ್ ನೆಚ್ಚಿಕೊಂಡಿರುವ ಪ್ರಯಾಣಿಕರು ಏನೆಲ್ಲಾ ಸರ್ಕಸ್ ಮಾಡಿ ಮನೆ ತಲುಪುವಂತಾಗಿದೆ. ಸಾರಿಗೆ ಅಧಿಕಾರಿಗಳು ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಿ ಪ್ರಯಾಣಿಕರ ಸಂಕಷ್ಟ ದೂರ ಮಾಡುತ್ತಾರೆ ಎಂದು ಆಶಿಸೋಣವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.