ರಾಜಕೀಯ ಪಕ್ಷಗಳು ಇತ್ತೀಚೆಗೆ ದಲಿತರನ್ನು ಹೀನವಾಗಿ–ಅಗ್ಗವಾಗಿ ಬಳಿಸಿಕೊಳ್ಳುತ್ತಿವೆ. ಇದು ಸರಿಯಲ್ಲ! ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮುಸ್ಲಿಂ ಸಮುದಾಯದಕ್ಕೆ ಸೇರಿದ ಒಬ್ಬ ಹೆಣ್ಣು ಮಗಳನ್ನು 1994ರಲ್ಲಿ ಮದುವೆ ಆಗಿದ್ದು, ಇದು ಅವರನ್ನು ಬಲ್ಲವರಿಗೆಲ್ಲ ಗೊತ್ತಿರುವ ವಿಚಾರ. ಅದನ್ನು ಈಗ ಬಿಜೆಪಿಯ ಶೋಭಾ ಕರಂದ್ಲಾಜೆ ಪ್ರಸ್ತಾಪಿಸಿ, ‘ಕೆಪಿಸಿಸಿ ಕಾರ್ಯಾಧ್ಯಕ್ಷರು ದಲಿತ ಹೆಣ್ಣು ಮಗಳನ್ನು ಮದುವೆ ಆಗಬೇಕಿತ್ತು’ ಎಂದಿರುವುದು ಸರಿಯಲ್ಲ.
ಶೋಭಾ ಅವರು ಮುಸ್ಲಿಂ ವಿರೋಧಿಯಂತೆ ಮೇಲ್ನೋಟಕ್ಕೆ ಕಂಡು ಬಂದರೂ ಒಳಗೆ ತಾರತಮ್ಯದ ಭಾವ ಇದೆ. ಇಂಥ ಮಾತು, ಶೋಭಾ ಅವರಿಗೆ ಶೋಭೆ ತರದು! ಮದುವೆ ಅನ್ನೋದು ಅವರವರ ಬಾಳಿನ ಅದೃಷ್ಟ. ಕಂಕಣಭಾಗ್ಯ, ಋಣಾನುಬಂಧವನ್ನು ಯಾರಿಂದಲೂ ಕಸಿಯಲು ಆಗದು. ಋಣ ಇದ್ದರೆ ಯಾರು–ಯಾವಾಗಲಾದರೂ ಮದುವೆ ಆಗಬಹುದು. ಯಾವ ಸಮುದಾಯದವರಿಗೇ ಆಗಲಿ ಪ್ರೀತಿಸಿ ಮದುವೆ ಆಗುವ ಹಕ್ಕು ಇರುವಾಗ ಇದ್ಯಾವ ಕ್ಯಾತೆ ಹೇಳಿ!
ಹೆಣ್ಣು–ಹೊನ್ನು–ಮಣ್ಣು ಒಲಿಯಲು ಅದೃಷ್ಟ ಬೇಕು ತಾನೆ? ಹಾಗಾಗಿ ಇಲ್ಲಿ ದಲಿತರನ್ನು ಅಡ್ಡ ತಂದು ಪರೋಕ್ಷವಾಗಿ ಅವರನ್ನು ಇನ್ನಷ್ಟು ಕೀಳುಮಟ್ಟದಲ್ಲಿ ಕಾಣುವಂತಹ ಧೋರಣೆಯನ್ನು ಯಾವ ರಾಜಕೀಯ ಪಕ್ಷದವರೂ ಮಾಡಬಾರದಲ್ಲವೇ? ದಲಿತರು ಮನುಜರಲ್ಲವೇ? ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳೇ ಹೀಗೆ ಮಾಡಿದರೆ ಸಮಾನತೆ ಇನ್ನೆಲ್ಲಿಂದ ಬಂದೀತು ಹೇಳಿ!
-ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.