ADVERTISEMENT

ಸರ್ಕಾರಿ ಶಾಲಾ ಶಿಕ್ಷಕರಿಂದ ಹಣ ಅಪೇಕ್ಷಿಸುವ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು ಉನ್ನತ ವ್ಯಾಸಂಗಕ್ಕೆ ಹೋಗಲು ಇಲಾಖೆಯ ಅನುಮತಿ ಪಡೆಯಲು ಉಪ ನಿರ್ದೇಶಕರ ಕಚೇರಿಗೆ ಲಿಖಿತ ಮನವಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ನಿಯಮದ ಅನ್ವಯ ಗುಲ್ಬರ್ಗಾ ಉಪ ನಿರ್ದೇಶಕರ ಕಚೇರಿಗೆ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೂ ಸಂಬಂಧಪಟ್ಟ ಸಿಬ್ಬಂದಿ ಸ್ಪಂದಿಸುತ್ತಿಲ್ಲ.
 
ಹೆಚ್ಚು ಒತ್ತಾಯಿಸಿದರೆ ಅರ್ಜಿ ಕಳೆದುಹೋಗಿದೆ. ಇನ್ನೊಮ್ಮೆ ಸಲ್ಲಿಸಿ ಎನ್ನುತ್ತಾರೆ. ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಅನುಮತಿ ಕೇಳಿದ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ನಿಮ್ಮ `ಪದವಿ~ ಪೂರ್ಣಗೊಂಡಿದೆಯೇ ಎಂಬ ಪ್ರಶ್ನೆ ಕೇಳುತ್ತಾರೆ.
 
ಅನುಮತಿ ಪಡೆಯಲು ರಜೆ ಹಾಕಿ ಬಂದು ಹೋಗಲು ತೊಂದರೆಯಾಗುತ್ತದೆ. ಬೇಗ ಪರವಾನಗಿ ಕೊಡಿ ಎಂದು ಒತ್ತಾಯಿಸಿದರೆ ನಿಮ್ಮ ಉನ್ನತ ವ್ಯಾಸಂಗದಿಂದ ಇಲಾಖೆಗೆ  ಏನು ಪ್ರಯೋಜನ? ಅನುಮತಿ ಬೇಕಾದರೆ ದುಡ್ಡು (ಲಂಚ) ಕೊಡಿ ಎಂದು ಯಾವ ಹಿಂಜರಿಕೆ ಇಲ್ಲದೆ ಕೇಳುತ್ತಾರೆ.

ಶಿಕ್ಷಣ ಇಲಾಖೆಗೆ ಬರುವ ಅರ್ಜಿಗಳು, ಕಡತಗಳ ವಿಲೇವಾರಿ ಒಂದು ಕಾಲಮಿತಿಯಲ್ಲಿ ನಡೆಯಬೇಕು ಎಂಬ ನಿಯಮವಿದೆ. ಅರ್ಜಿ ಸಲ್ಲಿಸಿದ ತಮ್ಮದೇ ಇಲಾಖೆಯ ನೌಕರರೊಂದಿಗೆ ಹಣದ ಚೌಕಾಸಿಗೆ ಇಳಿಯುವ ಸಿಬ್ಬಂದಿ ಉಪ ನಿರ್ದೇಶಕರ ಕಚೇರಿಯಲ್ಲಿದ್ದಾರೆ ಎಂಬುದೇ ನಾಚಿಕೆಗೇಡಿನ ಸಂಗತಿ. ಈ ಕುರಿತು ಶಿಕ್ಷಣ ಸಚಿವರು, ಆಯುಕ್ತರು ಗಮನ ಹರಿಸಬೇಕು. ಶಿಕ್ಷಕರ ಶೋಷಣೆ ತಪ್ಪಿಸಬೇಕು ಎಂದು ವಿನಂತಿಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.