ADVERTISEMENT

ಸಹಪಂಕ್ತಿ ಭೋಜನದ ಜೊತೆ ಬೇರೆ ಕಾರ್ಯವೂ ನಡೆಯಲಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಪೇಜಾವರ ಶ್ರಿ ಮತ್ತು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರಿಗಳು ದಲಿತರ ಮನೆಗಳಲ್ಲಿ ಸಾಮರಸ್ಯಕ್ಕಾಗಿ ಸಹಪಂಕ್ತಿ ಭೋಜನ ನಡೆಸುವ ಮೂಲಕ ಐತಿಹಾಸಿಕ ಪ್ರಯತ್ನಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

 ಜಾತಿ ಸಾಮರಸ್ಯ ಕಾಪಾಡುವುದಕ್ಕಾಗಿ ಕೇವಲ ದಲಿತರ ಮನೆಯಲ್ಲಿ ಇತರೆ ಜಾತಿಯವರು ಮತ್ತು ಇತರೆ ಜಾತಿಯವರ ಮನೆಯಲ್ಲಿ  ದಲಿತರು ಒಂದೇ ಸಾಲಿನಲ್ಲಿ ಕುಳಿತು ಊಟಮಾಡುವುದರಿಂದ ಸಾಮರಸ್ಯ ಸಾಧ್ಯ ಎನ್ನುವುದಕ್ಕಿಂತ ಸಮಾಜದಲ್ಲಿ ಸಮಾನತೆಗಾಗಿ ಬೇರೆ ರೀತಿಯದಾದ ಕ್ಷೇತ್ರಗಳನ್ನು (ಕಾರ್ಯಗಳನ್ನು) ಆಯ್ದುಕೊಂಡರೆ ಸೂಕ್ತ. 
 
ಬಳ್ಳಾರಿ, ದಾವಣಗೆರೆ, ಹಾವೇರಿ ಗದಗ, ಕೊಪ್ಪಳ, ಗುಲ್ಬರ್ಗಾ, ಬೀದರ, ರಾಯಚೂರು ಹೀಗೆ ರಾಜ್ಯದ ಹಲವು ಭಾಗಗಳಲ್ಲಿ  ದಲಿತರಿಗೆ  ಕ್ಷೌರಿಕ ವೃತ್ತಿಯವರು ತಮ್ಮ ಅಂಗಡಿಯಲ್ಲಿ ಪ್ರವೇಶ ನಿಷಿದ್ಧ ಮಾಡಿರುವುದು ಸತ್ಯ ಸಂಗತಿ. 

 ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಗ್ರಾಮವೊಂದರಲ್ಲೇ ಶೇ.99ರಷ್ಟು ಗ್ರಾಮಗಳಲ್ಲಿ ದಲಿರತರಿಗೆ  ಕ್ಷೌರ ಮಾಡುವುದಿಲ್ಲ. ಸಾರ್ವಜನಿಕ ಬಾವಿಗಳಲ್ಲಿ ನೀರು ಸೇದುವಂತಿಲ್ಲ. ದೇವಸ್ಥಾನದೊಳಗೆ ಪ್ರವೇಶವಿಲ್ಲ ಹಾಗೂ ಕೆರೆಯಲ್ಲಿ ಈಜಾಡುವಂತಿಲ್ಲ. 

  ಈ ಅಮಾನವೀಯ ಕಟ್ಟುಪಾಡುಗಳನ್ನು ವಿಚಾರವಂತ ದಲಿತ ಯುವಕರು ಪ್ರತಿಭಟನೆಗೆ ಮುಂದಾದರೆ ಅವರಿಗೆ ಗ್ರಾಮದಿಂದ ಬಹಿಷ್ಕರಿಸುವ ಪದ್ಧತಿ ಇದೆ.   
 
ಈ ಹಿನ್ನೆಲೆಯಲ್ಲಿ ಈ ಇಬ್ಬರು ಶ್ರಿಗಳು ಸಾಮರಸ್ಯ ಪಾದಯಾತ್ರೆಯ ನೆನಪಿಗಾಗಿ ಸಹಪಂಕ್ತಿ ಊಟವನ್ನು ಮುಂದುವರಿದ ಪ್ರದೇಶಗಳಲ್ಲಿ  ಮಾಡುವುದಕ್ಕಿಂತ ಬಯಲು ಸೀಮೆಯ ಅತ್ಯಂತ ಹಿಂದುಳಿದ ಜಿಲ್ಲೆಗಳಿಗೆ ಆಗಮಿಸಿ ಊಟ ಮಾಡುವುದಷ್ಟೆ ಅಲ್ಲ ಅದರ ಜೊತೆಗೆ ಗ್ರಾಮ ವಾಸ್ತವ್ಯ ಮಾಡಿ ಗ್ರಾಮದ ಮುಖಂಡರು ಮತ್ತು ದಲಿತರ ನಡುವೆ ಸಾಮರಸ್ಯ ಉಂಟು ಮಾಡಲು ಪ್ರಯತ್ನಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.